ದಾವಣಗೆರೆ : ಹಿಟ್ಲರ್ ಹೇಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಂದು ನಂತರ ಸರ್ವ ನಾಶವಾದ. ಇದೇ ರೀತಿ ಯೋಗಿ ಆದಿತ್ಯನಾಥ್ ವರ್ತನೆ ಇದೆ. ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬರುವ ಸಾಧ್ಯತೆಗಳಿವೆ. ದೇಶದ ಜನ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಾಮಾಜಿಕ ಹೋರಾಟಗಾರ, ಧಾರವಾಡ ಸಮಾಜ ಪರಿವರ್ತನಾ ಸಂಸ್ಥೆಯ ಸಂಸ್ಥಾಪಕ ಎಸ್.ಆರ್ ಹಿರೇಮಠ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಉತ್ತರಪ್ರದೇಶದಲ್ಲಿ ಮತ್ತೆ ಬಿಜೆಪಿ ಪಕ್ಷ ಬಹುಮತ ಪಡೆದ ಬೆನ್ನಲ್ಲೇ ಯೋಗಿಯವರಿಂದ ಸಾಕಷ್ಟು ತೊಂದರೆ ಆಗಲಿದೆ. ಗೋಹತ್ಯೆ ನಿಷೇಧ ಕಾಯ್ದೆ ಹೆಸರಿನಲ್ಲಿ ಜನರಿಗೆ ಹಿಂಸೆ ಕೊಟ್ಟದ್ದು ಯೋಗಿ ಆದಿತ್ಯನಾಥ್ ಅವರು ಎಂದು ದೇಶದ ಜನರಿಗೆ ಗೊತ್ತಿದೆ. ಜತೆಗೆ ರೈತರ ಹತ್ಯೆಗೆ ಕಾರಣರಾದ ಸಚಿವರ ಪುತ್ರನ ರಕ್ಷಣೆಗೆ ನಿಂತದ್ದು, ಇದೇ ಯೋಗಿ ಅದಿತ್ಯನಾಥ್ ಎಂದು ವಾಗ್ದಾಳಿ ನಡೆಸಿದರು.
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಎರಡನೇ ಬಾರಿಗೆ ಗೆದ್ದಿದ್ದಾರೆ. ಇವರಿಂದ ಮುಂಬರುವ ದಿನಗಳಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ. ಜತೆಗೆ ಪ್ರತಿಪಕ್ಷಗಳು ತಾವು ಮಾಡಬೇಕಾದ ಕಾರ್ಯದ ಬಗ್ಗೆ ಸ್ಪಷ್ಟವಾಗಿ ಚಿಂತನೆ ಮಾಡಬೇಕಿದೆ. ಪ್ರತಿಪಕ್ಷಗಳ ಚಿಂತನೆಗಳು ಸ್ಪಷ್ಟವಾಗಿರದೇ ಇರುವುದರಿಂದ ಮತ್ತೆ ಯುಪಿಯಲ್ಲಿ ಯೋಗಿಗೆ ಗೆಲುವು ಸಿಕ್ಕಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಸೋಮನಾಥ ಟ್ರಸ್ಟ್ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಿ, ಮೂಲಸೌಕರ್ಯಗಳ ಕುರಿತು ಚರ್ಚೆ