ದಾವಣಗೆರೆ: ನ್ಯಾಮತಿ ತಾಲೂಕಿನ ಮಾದನಬಾವಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಕೋವಿಡ್ ಕೇರ್ ಸೆಂಟರ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಕೋವಿಡ್ ಕೇರ್ ಸೆಂಟರ್ನಲ್ಲಿ ಅವ್ಯವಸ್ಥೆ ಇದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೇ ಭೇಟಿ ನೀಡಿದ ರೇಣುಕಾಚಾರ್ಯ, ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.
ಕೊರೊನಾ ಸೋಂಕಿತರ ಬಳಿ ಅಹವಾಲು ಕೇಳಿದ ಅವರು, ಆತ್ಮಸ್ಥೈರ್ಯ ತುಂಬಿದರು. ಕೆಲವರು ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸರಿಯಲ್ಲ. ವಾಸ್ತವವಾಗಿ ಅವ್ಯವಸ್ಥೆ ಇದ್ದರೆ ತಿಳಿಸಿ. ಯಾವ ಸಮಸ್ಯೆ ಇಲ್ಲದಿದ್ದರೂ ಅಪಪ್ರಚಾರ ನಡೆಸಲಾಗುತ್ತಿದೆ. ನಿಮಗೇನಾದ್ರೂ ಸಮಸ್ಯೆ ಇದೆಯಾ ಎಂದು ಸೋಂಕಿತರನ್ನು ಪ್ರಶ್ನಿಸಿದಾಗ ‘ವ್ಯವಸ್ಥೆ ಚೆನ್ನಾಗಿದೆ’ ಎಂದು ಹೇಳಿದರು.
ನ್ಯೂನತೆ ಬಾರದ ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಸೋಂಕಿತರಿಗೆ ಎಲ್ಲಾ ರೀತಿಯ ಸೌಲಭ್ಯ ಸಿಗುವಂತಾಗಬೇಕು. ಈಗ ನಾನು ಪರಿಶೀಲಿಸಿದ್ದೇನೆ. ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.