ದಾವಣಗೆರೆ: ಏಕಪತ್ನಿ ವ್ರತಸ್ಥ ಎಂಬ ಸಚಿವ ಸುಧಾಕರ್ ಹೇಳಿಕೆಗೆ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಆಕ್ರೋಶ ಹೊರಹಾಕಿದ್ದು, ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ದಾವಣಗೆರೆ ಪಾಲಿಕೆಯ 20ನೇ ವಾರ್ಡ್ನ ಉಪಚುನಾವಣಾ ಪ್ರಚಾರದ ಮುನ್ನ ಮಾತನಾಡಿದ ಅವರು, ಸುಧಾಕರ್ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು, ಸಚಿವರಾಗಿ ಮುಂದುವರೆಯುವುದಕ್ಕೆ ಅವರಿಗೆ ನೈತಿಕತೆ ಇಲ್ಲ ಎಂದಿದ್ದಾರೆ.
ರಾಜ್ಯದ ಆರೂವರೆ ಕೋಟಿ ಜನರನ್ನ ಪ್ರತಿನಿಧಿಸುತ್ತಾರೆ, ಅವರು ಆ ಹುದ್ದೆಗೆ ಕಳಂಕ ತರುವಂತ ಕೆಲಸ ಮಾಡಕೂಡದು. ಅದಲ್ಲದೆ ಮಾಧ್ಯಮದಲ್ಲಿ ಅಶ್ಲೀಲ ವಿಡಿಯೋ ಬಿತ್ತರಿಸದಂತೆ ಕೋರ್ಟ್ ಆರ್ಡರ್ ತಂದಿದ್ದಾರೆ. ಅವರ ಮೇಲೆ ಎರಡು ಗಂಭೀರ ಆರೋಪಗಳಿವೆ, ಕೂಡಲೇ ಅವರು ರಾಜೀನಾಮೆ ನೀಡಬೇಕು. ತನಿಖೆ ಎದುರಿಸಿ ಅವರು ಪ್ರಾಮಾಣಿಕರು ಅನ್ನೋದನ್ನ ರುಜುವಾತು ಮಾಡಿ ಬಳಿಕ ಮಂತ್ರಿಯಾಗಲಿ ಎಂದರು.
6 ಮಂದಿ ಮಂತ್ರಿ ಕೋರ್ಟ್ಗೆ ತೆರಳಿರುವ ಕುರಿತು ಪ್ರತಿಕ್ರಿಯಿಸಿ, ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ ಮಾರ್ಗದರ್ಶನದಲ್ಲಿ ಎಸ್ಐಟಿ ತನಿಖೆ ಮಾಡಬೇಕು, ಯಾವುದೇ ತಪ್ಪು ಮಾಡಿಲ್ಲ ಅನ್ನೋದಾದರೆ ತನಿಖೆ ಎದುರಿಸಲಿ ಎಂದು ಪಿಟಿಪಿ ಸವಾಲ್ ಎಸೆದಿದ್ದಾರೆ. ಹಿಂದೆ ಕಾಂಗ್ರೆಸ್ ಸರ್ಕಾರ ಸಾಕಷ್ಟು ಪ್ರಕರಣಗಳನ್ನು ಸಿಬಿಐಗೆ ನೀಡಿದ್ದು, ಆ ನೈತಿಕತೆ ಬಿಜೆಪಿಗೆ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆಯಾಗಲಿ ಎಂದು ಸವಾಲು ಹಾಕಿದ್ದರು. ಅವರ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: 'ಸಿಡಿ ತಗೊಂಡು ನಾನೇನ್ ಮಾಡ್ಲಿ, ನನಗೆ ವಯಸ್ಸಾಗಿದೆ ನಡೀರಿ'