ದಾವಣಗೆರೆ : ಸಿದ್ದರಾಮಯ್ಯ ಅವರಂತಹ ಮೋಸಗಾರ ಇನ್ನೊಬ್ಬ ಇಲ್ಲ, ಸಿದ್ದರಾಮಯ್ಯರ ಕಣ ಕಣದಲ್ಲೂ ಮೋಸ ಇದೆ, ದೇವೇಗೌಡರಿಗೆ ಮೋಸ ಮಾಡಿ ಕಾಂಗ್ರೆಸ್ಗೆ ಬಂದರೂ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗಿಯಾಗುವ ಮುನ್ನ ಮಾತನಾಡಿದ ಅವರು, ಸಿದ್ದರಾಮಯ್ಯ ಇನ್ಯಾವುದೋ ಪಕ್ಷ ಕಟ್ಟಿ ಮೋಸ ಮಾಡಿ ಬಂದರು, ವಿರೋಧ ಪಕ್ಷ ಸ್ಥಾನ ಇಲ್ಲ ಅಂದರೆ ಕಾಂಗ್ರೆಸ್ನಲ್ಲೂ ಅವರು ಇರುತ್ತಿರಲ್ಲ. ಕಾಂಗ್ರೆಸ್ ಪಕ್ಷ ಕಟ್ಟಲು ಬಂದಿಲ್ಲ, ಅಹಿಂದ ಬಳಸಿ ಮೋಸ ಮಾಡಲು ಬಂದಿದ್ದಾರೆ. ಮಾಜಿ ಸಚಿವ ಬಿಬಿ ಚಿಮ್ಮನ ಕಟ್ಟಿ ಅವರಿಗೆ ಎಂಎಲ್ಸಿ ಮಾಡುತ್ತೇವೆ ಅಂದು ಬಾದಾಮಿ ಕ್ಷೇತ್ರ ಕಸಿದುಕೊಂಡು ಮೋಸ ಮಾಡಿದರು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ಗೆ ತಂದ ಎಚ್ ಎಂ ರೇವಣ್ಣ, ವಿಶ್ವನಾಥ್ ಗತಿ ಏನಾಗಿದೆ, ಮುಂದಿನ ದಿನಗಳಲ್ಲಿ ಇವರಿಗೆ ಚಾಮುಂಡೇಶ್ವರಿ ಕ್ಷೇತ್ರನೂ ಇಲ್ಲ, ಬಾದಾಮಿ ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧಿಸಲು ಅವಕಾಶ ಇರಲ್ಲ. ಆಗ ಚಾಮರಾಜಪೇಟೆಯಲ್ಲಿ ಚುನಾವಣೆ ಸ್ಪರ್ಧಿಸಲು ಜಮೀರ್ ಕೈ ಕಾಲು ಹಿಡಿಯಬೇಕು ಅವರಿಗೆ ಮುಸ್ಲಿಮರ ಮತಗಳೇ ಗತಿಯಾಗಲಿದ್ದು, ಜನ ಸಿದ್ದರಾಮಯ್ಯ ಅವರನ್ನ ನಂಬಲ್ಲ ಎಂದರು.
ಡಿಕೆಶಿ ಹೇಳಿಕೆಗೆ ಈಶ್ವರಪ್ಪ ಗರಂ :
ಬಿಜೆಪಿಗೆ ಸೇರದಿದ್ದಕ್ಕೆ ತಿಹಾರ ಜೈಲಿಗೆ ಕಳುಹಿಸಿದರು ಎಂಬ ಡಿಕೆಶಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಅವರನ್ನ ಬಿಜೆಪಿ ತಗೋಬೇಕಾ..?, ದೇವರು ಆ ಪರಿಸ್ಥಿತಿ ತರಬಾರದು, ರೈಡ್ ಆದಾಗ ಅವರ ಮನೆಯಲ್ಲಿ ಬಂಡಲ್ ಗಟ್ಟಲೇ ಹಣ, ನೋಟಿಸ್ ಸಿಕ್ಕಿತ್ತು. ಅವ್ಯವಹಾರ ಮಾಡಿದ ಹಣ ಇದೆಲ್ಲ, ಡಿಕೆಶಿ ಬಿಜೆಪಿಗೆ ಬಂದರೆ ಯಾವ ನಾಯಕರು ಒಪ್ಪಲ್ಲ, ಡಿಕೆಶಿ ಬಿಜೆಪಿಗೆ ಬಂದರೆ ನಾವ್ಯಾರು ಅಂದು ಬಿಜೆಪಿಯಲ್ಲಿ ಇರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಡಿ.ಕೆ ಶಿವಕುಮಾರ್ಗೆ ಆಹ್ವಾನ ನೀಡಿಲ್ಲ, ಅವರ ಅವಶ್ಯಕತೆಯೂ ನಮಗಿಲ್ಲ: ಸಚಿವ ಅಶ್ವತ್ಥ್ ನಾರಾಯಣ್
ಕಾಂಗ್ರೆಸ್ ನವರು ಮಂಡಕ್ಕಿ ಹಂಚುತ್ತಿದ್ದಾರಾ..?
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಣ ಹಂಚುತ್ತಿದೆ ಎಂಬ ಆರೋಪಕ್ಕೆ ಈಶ್ವರಪ್ಪ ಪ್ರತಿಕ್ರಿಯಿಸಿ, ಕಾಂಗ್ರೆಸ್ ನವರು ಮಂಡಕ್ಕಿ ಹಂಚುತ್ತಿದ್ದಾರಾ..? , ಬಿಜೆಪಿ ಸದಸ್ಯರು ಹುಲಿಗಳಿದ್ದಂತೆ, ಸಿದ್ಧಾಂತ ನಂಬಿ ಬಿಜೆಪಿಗೆ ಮತ ಹಾಕುತ್ತಾರೆ, ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿ 15ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ, ಸಂಪುಟ ವಿಸ್ತರಣೆ ಆಗಲಿದೆ ಎಂದು ಹಿರಿಯರು ಈಗಾಗಲೇ ಹೇಳಿದ್ದಾರೆ, ಅದು ಮುಗಿದು ಹೋದ ಕಥೆಯಾಗಿದೆ.