ದಾವಣಗೆರೆ: ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ರಾಜ್ಯ ವಿಧಾನಸಭೆ ಕಣ ಮತ್ತಷ್ಟು ರಂಗೇರುತ್ತಿದೆ. ದಾವಣಗೆರೆ ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಹಂಚಿದ್ದಾರೆ ಎನ್ನಲಾದ ಸೀರೆಗಳನ್ನು ಬುಧವಾರ ರಾತ್ರಿ ಜನರು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. "ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿ, ಈ ರೀತಿಯ ವಸ್ತುಗಳನ್ನು ನೀಡಬೇಡಿ" ಎಂದು ಒತ್ತಾಯಿಸಿದರು.
ಭಾಷಾ ನಗರದ ನಿವಾಸಿಗಳು ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಭಾವಚಿತ್ರಗಳಿರುವ ಸೀರೆಗಳ ಬ್ಯಾಗ್ಗಳನ್ನು ಒಂದೆಡೆ ರಾಶಿ ಹಾಕಿ ಬೆಂಕಿ ಹಚ್ಚಿದರು. ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಡಿ. ಈ ರೀತಿಯ ಆಮಿಷಗಳನ್ನು ನಾವು ಸ್ವೀಕರಿಸಲ್ಲ ಎಂದು ಪ್ರತಿಭಟಿಸಿದರು.
"ಭಾಷಾ ನಗರದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ, ರಸ್ತೆಗಳಿಲ್ಲ. ಜನರು ಇಲ್ಲಿ ವಾಸಿಸುವುದೇ ಕಷ್ಟಕರವಾಗಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಂದರೆ ಆಮಿಷಗಳನ್ನು ಒಡ್ಡುತ್ತಾರೆ. ಇಂತಹದ್ದನ್ನೆಲ್ಲಾ ನಾವು ಸ್ವೀಕರಿಸಲ್ಲ" ಎಂದು ಸ್ಥಳೀಯ ಮಹಿಳೆಯರು ಸೀರೆಗಳನ್ನು ರಸ್ತೆಯಲ್ಲಿ ಎಸೆದು ಆಕ್ರೋಶ ಹೊರಹಾಕಿದರು.
ಮಹಿಳೆಯೊಬ್ಬರು ಮಾತನಾಡಿ, "ಕಡಿಮೆ ಬೆಲೆಯ ಸೀರೆಗಳನ್ನು ಕೊಟ್ಟು ಜನರನ್ನು ಯಾಮಾರಿಸಲಾಗುತ್ತಿದೆ. ರಂಜಾನ್ ವೇಳೆ ದಾನ-ಧರ್ಮ ಮಾಡುತ್ತೇವೆ. ಹೀಗೆ ಆಮಿಷಗಳನ್ನು ನೀಡುವ ಬದಲು, ನಮ್ಮ ಕಷ್ಟಗಳನ್ನು ಆಲಿಸಲಿ" ಎಂದು ಹೇಳಿದರು.
ಮುಸ್ಲಿಂ ಮುಖಂಡ ಮನ್ಸೂರ್ ಅಲಿ ಮಾತನಾಡಿ, "ಸೀರೆಯ ಬ್ಯಾಗ್ಗಳನ್ನು ಮನೆಗೆ ಕಾಂಗ್ರೆಸ್ ಮುಖಂಡರು ಎಸೆದು ಹೋಗ್ತಿದ್ದಾರೆ" ಎಂದು ಆರೋಪಿಸಿದರು. ಇದೇ ವೇಳೆ, "ಕಾಲೋನಿಗೆ ಮೂಲಭೂತ ಸೌಕರ್ಯಗಳು ಬೇಕಾಗಿದೆ. ಆದ್ದರಿಂದ ಇವುಗಳನ್ನು ಮಹಿಳೆಯರು ಸುಟ್ಟು ಹಾಕುತ್ತಿದ್ದಾರೆ" ಎಂದರು.
ಬಾಗಲಕೋಟೆಯಲ್ಲಿ ಅಕ್ರಮ ವಸ್ತುಗಳ ಜಪ್ತಿ: ಮತದಾರರಿಗೆ ವಿವಿಧ ಆಮಿಷಗಳನ್ನೊಡ್ಡಿ ಸೆಳೆಯುವ ಪ್ರಕರಣಗಳು ರಾಜ್ಯದ ಅಲ್ಲಲ್ಲಿ ವರದಿಯಾಗುತ್ತಿವೆ. ಲಕ್ಷಾಂತರ ಮೌಲ್ಯದ ಇಸ್ತ್ರಿ ಪೆಟ್ಟಿಗೆಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹನವನ್ನು ಬಾಗಲಕೋಟೆ ಎಸ್.ಪಿ ಜಯಪ್ರಕಾಶ್ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದೆ.
ನಗರದ ಹೊರವಲಯದ ಮಹಾರುದ್ರಪ್ಪನ ಹಳ್ಳದ ಬಳಿ ಜಿಲ್ಲೆಯ ಪ್ರತಿಷ್ಠಿತ ರಾಜಕೀಯ ನಾಯಕರಿಗೆ ಸೇರಿದ ಇಸ್ತ್ರಿ ಪೆಟ್ಟಿಗೆಗಳು ಇರಬಹುದೆಂಬ ಶಂಕೆ ಬಂದ ಹಿನ್ನೆಲೆ ಕ್ಯಾಂಟರ್ ವಾಹನದ ಮೇಲೆ ನಗರದ ಪೊಲೀಸರು ದಾಳಿ ಮಾಡಿದ್ದು, 6798 ಇಸ್ತ್ರಿ ಪೆಟ್ಟಿಗೆಗಳನ್ನು ಜಪ್ತಿ ಮಾಡಿದ್ದಾರೆ.
ಕ್ಯಾಂಟರ್ ವಾಹನ ಪರಿಶೀಲಿಸಿದ ಪೊಲೀಸರು, ಅಂದಾಜು 60 ಲಕ್ಷ ಮೌಲ್ಯದ 6798 ಇಸ್ತ್ರಿ ಪೆಟ್ಟಿಗೆಗಳು ಇರುವುದನ್ನು ಪತ್ತೆ ಮಾಡಿದ್ದಾರೆ. ವಾಹನದ ಚಾಲಕನ ಬಳಿ ಸಮರ್ಪಕ ದಾಖಲೆ ಇಲ್ಲದಿರುವ ಕಾರಣ ಅವುಗಳನ್ನು ಜಪ್ತಿ ಮಾಡಿ, ತನಿಖೆ ನಡೆಸುತ್ತಿದ್ದಾರೆ.
16 ಲಕ್ಷ ರೂ. ನಗದು ವಶ: ಮತ್ತೊಂದು ಪ್ರಕರಣದಲ್ಲಿ ಅಮೀನಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗುತ್ತಿದ್ದ 16 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಅಮೀನಗಡ ಮೂಲಕ ಗುಡೂರ ಗ್ರಾಮಕ್ಕೆ ಸಾಗಿಸುತ್ತಿದ್ದ ಸಮಯದಲ್ಲಿ ಪೊಲೀಸರು ದಾಳಿ ಮಾಡಿ 16 ಲಕ್ಷ ನಗದನ್ನು ಜಪ್ತಿ ಮಾಡಿದ್ದಾರೆ. ಯಾವುದೇ ದಾಖಲೆ ಇಲ್ಲದೇ ಹಣ ಸಾಗುತ್ತಿರುವುದರಿಂದ ಚಾಲಕನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಜನರಿಗೆ ಆಮಿಷ.. ಕಾಫಿ ನಾಡಲ್ಲಿ 9 ಕೆಜಿಗೂ ಆಧಿಕ ಚಿನ್ನ, ಸೀರೆಗಳು ವಶಕ್ಕೆ