ದಾವಣಗೆರೆ: ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ ಎರಡನೇ ಅತಿದೊಡ್ಡ ಐಎಂಎ ವಂಚನೆ ಪ್ರಕರಣ ದಾವಣಗೆರೆಯಲ್ಲಿ ನಡೆದಿದೆ ಎನ್ನಲಾಗಿದ್ದು, ದುಬೈಗೆ ಪರಾರಿಯಾದ ನಂತರ ಐ.ಎಂ.ಎ ಮುಖ್ಯಸ್ಥ ಮನ್ಸೂರ್ ಅಲಿ ಖಾನ್ ದಾವಣಗೆರೆಯಲ್ಲಿ ನಡೆಯುತ್ತಿದ್ದ ಬೆಳವಣಿಗೆ ಬಗ್ಗೆ ಮಾಹಿತಿ ಪಡೆಯುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ..
ಬೆಂಗಳೂರು ಬಳಿಕ ದಾವಣಗೆರೆಯಲ್ಲಿಅತಿ ಹೆಚ್ಚು ಹೂಡಿಕೆದಾರರು ಐ.ಎಂ.ಎಯಲ್ಲಿ ಹಣ ಹೂಡಿದ್ದರು ಎಂದು ಹೇಳಲಾಗಿದ್ದು, ಈ ಹಿನ್ನಲೆ ಮನ್ಸೂರ್ ಅಲಿ ಖಾನ್ ದಾವಣಗೆರೆಯಲ್ಲಿ ಐಎಂಎ ವಿರುದ್ದ ನಡೆಯುತ್ತಿರುವ ಹೋರಾಟದ ಬಗ್ಗೆ ದುಬೈಯಲ್ಲಿ ಕೂತು ಮಾಹಿತಿ ಪಡೆಯುತ್ತಿದ್ದ ಎಂದು ಹೇಳಲಾಗಿದೆ.
ಈ ಬಗ್ಗೆ ಹೂಡಿಕೆದಾರ ಮಜೀದ್ ಮಾಹಿತಿ ನೀಡಿ, ಐ.ಎಂ.ಎ ಹಗರಣ ಸಂಬಂಧ ಎಸ್.ಐ.ಟಿ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ. ರಾಜ್ಯದಲ್ಲಿ ಹಗರಣ ಕುರಿತು 40 ಸಾವಿರಕ್ಕೂ ಹೆಚ್ಚು ದೂರು ದಾಖಲಾಗಿವೆ. ದಾವಣಗೆರೆ ಜಿಲ್ಲೆಯಲ್ಲಿ ಐ.ಎಂ.ಎಗೆ ಸೇರಿದ ಅಪಾರ ಪ್ರಮಾಣದ ಅಕ್ರಮ ಆಸ್ತಿ ಇದೆ. ಆದರೆ ಎಸ್ಐಟಿ ತನಿಖಾ ವರದಿಯಲ್ಲಿ ಇದರ ಪ್ರಸ್ತಾಪವೇ ಆಗಿಲ್ಲ. ಇದರಿಂದ ತನಿಖೆ ಹಾದಿ ತಪ್ಪುತ್ತಿರುವುದು ಸ್ಪಷ್ಟ. ಆದ್ದರಿಂದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿ, ಹಣ ಕಳೆದುಕೊಂಡವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಜಾರಿ ನಿರ್ದೇಶನಾಲಯದಿಂದ ಐ.ಎಂ.ಎ ಮುಖ್ಯಸ್ಥ ಮನ್ಸೂರ್ ಅಲಿ ಖಾನ್ನನ್ನು ಬಂಧಿಸಲಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಅಭಿನಂದಿಸುತ್ತೇವೆ. ಹಗರಣ ಸಂಬಂಧ ಬಂಧಿಸಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಹಗರಣದಲ್ಲಿ ಪ್ರಭಾವಿ ನಾಯಕರೂ ಶಾಮೀಲಾಗಿದ್ದಾರೆ. ನಮಗೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಹೂಡಿಕೆದಾರ ಮಜೀದ್ ಮನವಿ ಮಾಡಿದ್ದಾರೆ.
ದಾವಣಗೆರೆಯಲ್ಲಿ ಐ.ಎಂ.ಎ ಆಸ್ತಿ: ದಾವಣಗೆರೆಯಲ್ಲಿ ಐ.ಎಂ.ಎ ಕಂಪನಿಯ ಅಪಾರ ಪ್ರಮಾಣದ ಆಸ್ತಿ ಇದೆ. 25 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಇದೆ. ಇದನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಐ.ಎಂ..ಎಗೆ ಸೇರಿದ ದಾವಣಗೆರೆಯ ಗ್ಲೋಬಲ್ ಪಬ್ಲಿಕ್ ಸ್ಕೂಲ್ನ್ನು ಸರ್ಕಾರ ವಶಕ್ಕೆ ಪಡೆಯಬೇಕು. ಶಾಲೆಯ ಆಡಳಿತ ಮಂಡಳಿಯಲ್ಲಿ ಮನ್ಸೂರ್ ಖಾನ್, ದಾವಣಗೆರೆಯ ದಾದಾಪೀರ್, ನಿಜಾಮುದ್ದೀನ್ ಅಜಿಮುದ್ದೀನ್, ನಾಸಿರ್ ಹುಸೇನ್ ಇವರ ಹೆಸರು ಇದೆ. ಆದ್ದರಿಂದ ಇವರ ಮನೆಯನ್ನು ಜಪ್ತಿ ಮಾಡಿ, ಹಣ ಕಳೆದುಕೊಂಡವರಿಗೆ ನೀಡಬೇಕು ಎಂದು ಹಣ ಕಳೆದುಕೊಂಡ ಹೂಡಿಕೆದಾರರು ಮನವಿ ಮಾಡಿದ್ದಾರೆ.