ದಾವಣಗೆರೆ: ಕೊರೊನಾ ಸೋಂಕು ತಡೆಗೆ ಇಂದು ಸಂಪೂರ್ಣ ಲಾಕ್ ಡೌನ್ ವಿಧಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಹೊರಡಿಸಿರುವ ಆದೇಶಕ್ಕೆ ಬೆಣ್ಣೆನಗರಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಬಹುತೇಕ ರಸ್ತೆಗಳು ಖಾಲಿಖಾಲಿಯಾಗಿದ್ದು, ಕೆಲವೇ ಜನರ ಸಂಚಾರ ಕಂಡು ಬರುತ್ತಿದೆ. ಮೆಡಿಕಲ್ ಶಾಪ್ ಗಳು, ದಿನಸಿ ಅಂಗಡಿಗಳು ಸೇರಿದಂತೆ ತುರ್ತು ಸೇವೆಗೆ ಮಾತ್ರ ಅನುಮತಿ ನೀಡಲಾಗಿದೆ. ಉಳಿದಂತೆ ಜನರು ಮನೆಯಿಂದ ಹೊರಬರುವುದು ಕಡಿಮೆಯಾಗಿದೆ.
ಇನ್ನು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಸ್ ಸಂಚಾರ ಇಲ್ಲದಿರುವುದರಿಂದ ಬಿಕೋ ಎನ್ನುತ್ತಿದೆ. ಭಾನುವಾರ ಮೊದಲೇ ನಿಗದಿಪಡಿಸಿದ್ದ ಮದುವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮದ್ಯ ಮಾರಾಟ ನಿಷೇಧಿಸಲಾಗಿದೆ. ಉಳಿದಂತೆ ಲಾಕ್ ಡೌನ್ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅವಶ್ಯಕ ವಸ್ತುಗಳಿಗೆ ನಿರ್ಬಂಧ ಹೇರಲಾಗಿಲ್ಲ. ಸೋಮವಾರ ಬೆಳಿಗ್ಗೆ 7 ರಿಂದ ಎಂದಿನಂತೆ ಕೆಎಸ್ಆರ್ಟಿಸಿ ಬಸ್ ಗಳ ಸಂಚಾರ ಇರಲಿದೆ ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಎನ್. ಹೆಬ್ಬಾಳ್ ತಿಳಿಸಿದ್ದಾರೆ.