ದಾವಣಗೆರೆ: ನಗರದ ಶಾಮನೂರು ಆಂಜನೇಯ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ವಿಶೇಷ ಅಂದರೆ ಈ ರಥೋತ್ಸವದಲ್ಲಿ ಬೆಲ್ಲದ ಬಂಡಿ ಉತ್ಸವ ನಡೆಯುತ್ತದೆ. ರೈತರು ಬಂಡಿ ಕಟ್ಟುವುದಕ್ಕಾಗಿಯೇ ದುಬಾರಿ ದರದ ಎತ್ತುಗಳನ್ನು ಖರೀದಿಸುತ್ತಾರೆ. ಅಲ್ಲದೆ, ಬಂಡಿಗಳನ್ನ ಓಡಿಸಿ ಖುಷಿ ಪಡುತ್ತಾರೆ. ಶತಮಾನದಿಂದ ಆಚರಿಸಿಕೊಂಡು ಬರುತ್ತಿರುವ ಈ ಬಂಡಿ ಉತ್ಸವ ವಿಶೇಷವಾಗಿ ಜರುಗುತ್ತದೆ.
ಕಲರ್ ಕಲರ್ ಬಟ್ಟೆಗಳಲ್ಲಿ ಜೋಡಿ ಎತ್ತುಗಳು ಸಿಂಗಾರಗೊಂಡಿರುತ್ತವೆ. ಬಂಡಿಗಳು ಬಾಳೆ ತೆಂಗಿನ ಗರಿಗಳಲ್ಲಿ ಕಂಗೊಳಿಸುತ್ತವೆ. ಭಕ್ತರು ಹರ್ಷೋದ್ಘಾರದಿಂದ ಕೂಗುತ್ತ ಬಂಡಿಗಳನ್ನು ಓಡಿಸುತ್ತಾರೆ.. ಹೌದು, ದಾವಣಗೆರೆ ಹೊರವಲಯದ ಶಾಮನೂರು ಆಂಜನೇಯಸ್ವಾಮಿಯ ಉತ್ಸವದ ಪರಿ ಇದು. ಶಾಮನೂರಿನಲ್ಲಿ ಆಂಜನೇಯಸ್ವಾಮಿ ರಥೋತ್ಸವದ ನಿಮಿತ್ತ ಪ್ರತಿ ವರ್ಷ ಬಂಡಿಗಳ ಉತ್ಸವ ಆಯೋಜನೆ ಮಾಡಲಾಗುತ್ತೆ.
ಮೂರು ದಿನ ಬಂಡಿ ಉತ್ಸವ
ಮೂರು ದಿನಗಳ ಕಾಲ ಶಾಮನೂರಿನಲ್ಲಿ ಬಂಡಿ ಉತ್ಸವದ್ದೇ ಮೆರುಗು. ಜಾತ್ರೆ ನಿಮಿತ್ತ ನಡೆಯುವ ಈ ಬಂಡಿ ಉತ್ಸವದಲ್ಲಿ ಬೆಲ್ಲವನ್ನು ಹೊತ್ತು ಬಂಡಿಗಳನ್ನು ಓಡಿಸಲಾಗುತ್ತದೆ. ಉತ್ಸವಕ್ಕಾಗಿಯೇ ಭಕ್ತರು ಬೆಲ್ಲವನ್ನು ನೀಡುತ್ತಾರೆ. ಸಂಗ್ರಹಣೆಯಾದ ಬೆಲ್ಲವನ್ನ ಬಂಡಿಯಲ್ಲಿ ತುಂಬಿ ಉತ್ಸವ ನಡೆಸಲಾಗುತ್ತದೆ. ಬಳಿಕ ಆ ಬೆಲ್ಲವನ್ನ ಪಾನಕ ಮಾಡಿ ಭಕ್ತರಿಗೆ ವಿತರಣೆ ಮಾಡಲಾಗುತ್ತದೆ. ಹೀಗಾಗಿಯೇ ಇದಕ್ಕೆ ಬೆಲ್ಲದ ಬಂಡಿ ಉತ್ಸವ ಎಂದೇ ಕರೆಯಲಾಗುತ್ತದೆ.
ಪುರಾತನ ಕಾಲದಿಂದಲೂ ಉತ್ಸವ
ಪುರಾತನ ಕಾಲದಿಂದಲೂ ಉತ್ಸವದಲ್ಲಿ ಬಂಡಿಗಳನ್ನು ಓಡಿಸುವುದು ವಾಡಿಕೆ. ಈ ಉತ್ಸವಕ್ಕೆ ದಾವಣಗೆರೆ ಸೇರಿದಂತೆ ಸುತ್ತಲಿನ ಭಾಗಗಳ ಭಕ್ತರು ಭಾಗವಹಿಸುತ್ತಾರೆ. ರೈತರು ಬಂಡಿಗಳನ್ನು ತಂದು ಬಂಡಿ ಕಟ್ಟಿ ಓಡಿಸುತ್ತಾರೆ. ನಂತರ ಆ ಎತ್ತುಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಗುತ್ತದೆ.
150 ವರ್ಷಗಳಿಂದ ಜಾತ್ರೆ
ಶಾಮನೂರಿನಲ್ಲಿ 150 ವರ್ಷಗಳಿಂದ ಇಂತಹದೊಂದು ಉತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಮೂರು ದಿನ ನಡೆಯುವ ಈ ಉತ್ಸವದಲ್ಲಿ ಮೊದಲ ದಿನ ಆಂಜನೇಯಸ್ವಾಮಿ ರಥೋತ್ಸವ ನಡೆಯುತ್ತದೆ. ಬಳಿಕ ಮೂರನೇ ದಿನ ಈ ಬೆಲ್ಲದ ಬಂಡಿ ಉತ್ಸವ ನಡೆಯುತ್ತದೆ. ಜಾತ್ರೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಬಂಡಿಗಳು ಭಾಗವಹಿಸುತ್ತವೆ. ಅಲ್ಲದೆ, ಅದಕ್ಕಾಗಿಯೇ ರೈತರು ದುಬಾರಿ ದರ ನೀಡಿ ಎತ್ತುಗಳನ್ನ ಖರೀದಿ ಮಾಡುತ್ತಾರೆ. ಅಲ್ಲದೆ, ಆಂಜನೇಯಸ್ವಾಮಿಯ ಬಂಡಿ ಉತ್ಸವ ನಡೆಸಿ ಖುಷಿ ಪಡುತ್ತಾರೆ.
ಗ್ರಾಮೀಣ ಸೊಗಡು ಉಳಿಸಿದ ಉತ್ಸವ
ಒಟ್ಟಿನಲ್ಲಿ ಗ್ರಾಮೀಣ ಸೊಗಡು ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಶಾಮನೂರು ಬಂಡಿ ಉತ್ಸವ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದೆ. ಅಲ್ಲದೆ, ರೈತರಿಗೆ ಖುಷಿಯನ್ಮು ನೀಡುತ್ತಿದೆ.