ಮಂಗಳೂರು: ಮದುವೆ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬ ಯುವತಿಗೆ ಚುಡಾಯಿಸಿರುವ ಪರಿಣಾಮ ಸ್ಥಳದಲ್ಲಿದ್ದ ಯುವಕರ ಮಧ್ಯೆ ಜಗಳ ನಡೆದಿದೆ. ಈ ವೇಳೆ, ಯುವಕರು ತಡೆಯಲು ಬಂದ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದು, ಇದರಿಂದ ರೊಚ್ಚಿಗೆದ್ದ ಪೊಲೀಸರು ಅಟ್ಟಾಡಿಸಿಕೊಂಡು ಹೊಡೆದು ಮೂವರನ್ನು ವಶಕ್ಕೆ ಪಡೆದ ಘಟನೆ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದೆ.
ಕಾಸರಗೋಡು ಜಿಲ್ಲೆಯ ಶರಣ್(24), ಪ್ರಮೋದ್(24), ಅಜೇಶ್(22) ಬಂಧಿತ ಆರೋಪಿಗಳು.
ತೊಕ್ಕೊಟ್ಟು ಒಳಪೇಟೆಯಲ್ಲಿರುವ ಕ್ಲಿಕ್ ಸಭಾಂಗಣದಲ್ಲಿ ಇಂದು ಕೋಟೆಕಾರು ಮಾಡೂರಿನ ವಧು ಮತ್ತು ಕೇರಳದ ಕಾಸರಗೋಡಿನ ವರನಿಗೆ ಮದುವೆ ಏರ್ಪಟ್ಟಿತ್ತು. ಈ ವಿವಾಹ ಸಮಾರಂಭದಲ್ಲಿ ವರನ ಕಡೆಯ ಯುವಕನೊಬ್ಬ ವಧುವಿನ ಕಡೆಯ ಯುವತಿಗೆ ಚುಡಾಯಿಸಿದ ಎನ್ನಲಾಗಿದೆ. ಇದರಿಂದ ಆಕ್ರೋಶಿತನಾದ ಯುವತಿಯ ಸಹೋದರ ಚುಡಾಯಿಸಿದವನ ಮೇಲೆ ಹಲ್ಲೆ ನಡೆಸಿದ್ದಾನೆ.
ಇದನ್ನೂ ಓದಿ: ಪ್ರತಿ ಕ್ವಿಂಟಾಲ್ ರಾಗಿಗೆ 4 ಸಾವಿರ ರೂಪಾಯಿ ಕೊಡಿ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ
ಇದರಿಂದ ಪರಸ್ಪರ ಯುವಕರ ಗುಂಪೊಂದರ ಮಧ್ಯೆ ಬೀದಿ ಕಾಳಗ ನಡೆದಿದೆ. ಆಗ ಸ್ಥಳದಲ್ಲಿ ಉಳ್ಳಾಲ ಉರುಸ್ ಬಂದೋಬಸ್ತಿನಲ್ಲಿದ್ದ ಪೊಲೀಸರೊಬ್ಬರಿಗೂ ಉದ್ರಿಕ್ತರು ಕುತ್ತಿಗೆ ಹಿಚುಕಿ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ತಕ್ಷಣ ಸ್ಥಳದಲ್ಲಿದ್ದ ಇತರ ಪೊಲೀಸರು ಸೇರಿ ಹಲ್ಲೆಕೋರರನ್ನು ಅಟ್ಟಾಡಿಸಿ ಹೊಡೆದು ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.