ಸುಳ್ಯ (ದಕ್ಷಿಣಕನ್ನಡ): ರಾಜ್ಯಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕೇಂದ್ರ ಸರ್ಕಾರದ ಅಸಮರ್ಪಕ ಲಾಕ್ಡೌನ್ ನಿಯಮಗಳೇ ಕಾರಣ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಸುಳ್ಯ ನಗರ ಪಂಚಾಯಿತಿ ಸದಸ್ಯ ಎಂ. ವೆಂಕಪ್ಪಗೌಡ ಆರೋಪಿಸಿದ್ದಾರೆ.
ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ದೇಶಕ್ಕೆ ಕಾಲಿಟ್ಟ ಆರಂಭದಲ್ಲಿ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಂಡಿತ್ತು. ಅದೇ ಗಂಭೀರತೆ ಈಗ ಕಾಣುತ್ತಿಲ್ಲ. ಪ್ರಧಾನಿಯ ಗಂಭೀರತೆ ನೋಡಿ ಜನ ಹಿಂದೆ ಮುಂದೆ ನೋಡದೆ ಚಪ್ಪಾಳೆ ತಟ್ಟಿ, ದೀಪಾ ಬೆಳಗಿಸಿದ್ದರು. ಇಂದು ದೇಶದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದೆ. ಇದಕ್ಕೆ ಸರ್ಕಾರದ ಬೇಜವಾಬ್ದಾರಿ ಕಾರಣ ಎಂದು ಆಪಾದಿಸಿದರು.
ಹೊರ ರಾಜ್ಯಗಳಿಂದ ಊರಿಗೆ ಬರುತ್ತಿರುವವರಲ್ಲಿ ಕೊರೊನಾ ಪತ್ತೆ ಆಗುತ್ತಿದೆ. ಆರಂಭದಲ್ಲಿ ಲಾಕ್ಡೌನ್ ಹೇರಿದ್ದ ವಿಧಾನ ಸರಿಯಿಲ್ಲ. ಹೊರ ರಾಜ್ಯ, ಜಿಲ್ಲೆಗಳಲ್ಲಿ ಇರುವವರು ತಮ್ಮ ಊರಿಗೆ ಹಿಂತಿರುಗಲು 4- 5 ದಿನ ಅವಕಾಶ ಕೊಟ್ಟು ಲಾಕ್ಡೌನ್ ಜಾರಿಗೊಳಿಸಬೇಕಾಗಿತ್ತು. ಆಗ ಕೊರೊನಾ ಹೆಚ್ಚಾಗುವ ಸಾಧ್ಯತೆ ಇರುತ್ತಿರಲಿಲ್ಲ ಎಂದರು.