ಬಂಟ್ವಾಳ (ದ.ಕ): ಕೇರಳದಿಂದ ಕರ್ನಾಟಕಕ್ಕೆ ನಿಯಮವನ್ನು ಉಲ್ಲಂಘಿಸಿ ಗಡಿಯಲ್ಲಿ ಜನ ಸಾಗಾಟದಲ್ಲಿ ತೊಡಗಿದ್ದ ವಾಹನಗಳನ್ನು ಹಾಗೂ ರಸ್ತೆಯಲ್ಲಿ ಅಪಾಯಕಾರಿಯಾಗಿ ಓಡಾಡುತ್ತಿದ್ದ ದ್ವಿಚಕ್ರವಾಹನಗಳನ್ನು ವಿಟ್ಲ ಪೊಲೀಸ್ ಉಪನಿರೀಕ್ಷಕ ವಿನೋದ್ ಎಸ್. ಕೆ. ಅವರ ತಂಡ ವಶಕ್ಕೆ ಪಡೆದಿರುವ ಘಟನೆ ಪೆರುವಾಯಿ ಕಡಂಬಿಲದಲ್ಲಿ ನಡೆದಿದೆ.
ಕೇರಳ ಮೂಲದ ಟೂರಿಸ್ಟ್ ವಾಹನ, ಟೂರಿಸ್ಟ್ ಆಟೋ ರಿಕ್ಷಾ, ಎರಡು ಕೇರಳದ ಹಾಗೂ ಒಂದು ಕರ್ನಾಟಕದ ಮೋಟಾರ್ ಸೈಕಲ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆರಿಪದವು ಮೂಲಕ ಪೆರುವಾಯಿ ಹಾಗೂ ಶಿರಂಕಲ್ಲು ಸಂಪರ್ಕಿಸುವ ರಸ್ತೆ ಇದ್ದು, ಇದಕ್ಕೆ ಗಡಿಯಲ್ಲಿ ಮಣ್ಣು ಹಾಕಿ ಸಂಪರ್ಕ ಕಡಿತ ಮಾಡಿದ್ದರೂ ಅಕ್ರಮವಾಗಿ ಓಡಾಟದ ಪ್ರಯತ್ನ ಮಾಡಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ನಿವಾಸಿಗಳನ್ನು ಕರ್ನಾಟಕ ಗಡಿಯ ಮೂಲಕ ಬಂಟ್ವಾಳ ತಾಲೂಕು ಪೆರುವಾಯಿ ಎಂಬಲ್ಲಿಗೆ ಸಾಗಾಟ ಮಾಡುತ್ತಿದ್ದರು. ವಾಹನದಲ್ಲಿ ಜನರನ್ನು ಸಾಗಾಟಕ್ಕೆ ಪ್ರಯತ್ನ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಆರೋಪಿಗಳು ಕೃತ್ಯಕ್ಕೆ ಬಳಸಿದ ವಾಹನಗಳನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಸ್ಥಳ ಮಹಜರು ನಡೆಸಿ ವಾಹನಗಳನ್ನು ವಶಕ್ಕೆ ಪಡೆದಿದ್ದು, ಈ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.