ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್, ರೋಟಾರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ 2019 ನೇ ಸಾಲಿನ ವಂದನಾ ಪ್ರಶಸ್ತಿಯನ್ನು ಸಾಲು ಮರದ ತಿಮ್ಮಕ್ಕ ಹಾಗೂ ಶ್ರೀ ರಾಮಕೃಷ್ಣ ಮಿಷನ್ಗೆ ಪ್ರದಾನ ಮಾಡಲಾಯಿತು.
ನಗರದ ಓಶಿಯನ್ ಪರ್ಲ್ ಹೊಟೇಲ್ನ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭ ಪ್ರಶಸ್ತಿ ಸ್ವೀಕರಿಸಿದ ಮಂಗಳೂರು ಶ್ರೀ ರಾಮಕೃಷ್ಣ ಮಿಷನ್ನ ಜಿತಕಾಮಾನಂದ ಸ್ವಾಮೀಜಿ ಮಾತನಾಡಿ, ಯಾವುದೇ ಅಭಿಯಾನಕ್ಕೂ ಪೂರ್ತಿಯಾಗಿ ತೊಡಗಿಸಿಕೊಂಡರೆ ಮಾತ್ರ ಅದು ಮುಂದಕ್ಕೆ ಹೋಗಲು ಸಾಧ್ಯ. ಮಂಗಳೂರಿನಲ್ಲಿ ನಾವು ಹಮ್ಮಿಕೊಂಡ ಸ್ವಚ್ಛತಾ ಅಭಿಯಾನ ಮಂಗಳೂರಿನ ನಾಗರಿಕರು, ಸಂಘ ಸಂಸ್ಥೆಗಳು ಸ್ವಯಂ ತಾವಾಗಿಯೇ ಮುಂದೆ ಬರುವಂತೆ ಆಯಿತು ಎಂದು ಸಂತಸ ಹಂಚಿಕೊಂಡರು.
ಸಾಲುಮರದ ತಿಮ್ಮಕ್ಕ ಮಾತನಾಡಿ, ಮಕ್ಕಳಿಲ್ಲದ ಕೊರಗಿನಿಂದ ನನ್ನ ಗಂಡ ಮತ್ತು ನಾನು ನಮ್ಮ ಊರಿನಲ್ಲಿ ಗಿಡಗಳನ್ನು ನೆಡುವ ಕೆಲಸವನ್ನು ಮಾಡಿದ್ದೆವು. ಆ ಗಿಡಗಳನ್ನೇ ನಮ್ಮ ಮಕ್ಕಳೆಂದು ತಿಳಿದು ಪೋಷಣೆ ಮಾಡಿದೆವು. ಈಗ ಆ ಗಿಡಗಳು ಬೆಳೆದು ಹೆಮ್ಮರವಾಗಿದೆ ಎಂದು ಸಂಭ್ರಮ ಪಟ್ಟರು.
ಈ ಸಂದರ್ಭ ರೋಟರಿ ಅಧ್ಯಕ್ಷ ಸಂತೋಷ್ ಶೇಟ್, ರೋಟರ್ಯಾಕ್ಟ್ ಅಧ್ಯಕ್ಷ ಗಣೇಶ್ ಜಿ.ಟಿ., ವಂದನಾ ಪ್ರಶಸ್ತಿ ಚ್ಯಾರ್ ಮೆನ್ ಡಾ.ದೇವದಾಸ್ ರೈ, ಜೋಯೆಲ್ ಲೋಬೊ, ಜಯರಾಂ ಪೂಂಜಾ ಮತ್ತಿತರರು ಉಪಸ್ಥಿತರಿದ್ದರು.