ಮಂಗಳೂರು: ನಗರದ ಜನತೆ ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಇಂದು ತುಂಬೆ ವೆಂಟೆಡ್ ಡ್ಯಾಂಗೆ ಭೇಟಿ ನೀಡಿ ನೀರಿನ ಮಟ್ಟ ಪರಿಶೀಲಿಸಿದರು.
ಈ ವೇಳೆ ಮಾಧ್ಯಮವದರೊಂದಿಗೆ ಮಾತನಾಡಿದ ಅವರು, ಮಂಗಳೂರು ಜನತೆಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ದ.ಕ. ಜಿಲ್ಲಾಡಳಿತ ಹಾಗೂ ಶಾಸಕರೊಂದಿಗೆ ಚರ್ಚೆ ಮಾಡಿ ಸಮಸ್ಯೆ ಪರಿಹಾರಕ್ಕೆ ಸೂಚನೆಗಳನ್ನು ನೀಡಲಾಗುತ್ತದೆ. ಅಲ್ಲದೆ ತಾಲೂಕು ಮಟ್ಟದಲ್ಲಿ ನೀರಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಭಯ ನೀಡಿದರು.
ರಾಜ್ಯ ಸರ್ಕಾರ ಈಗಾಗಲೇ ಕುಡಿಯುವ ನೀರಿಗಾಗಿ ಸುಮಾರು 6.25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ನೀತಿ ಸಂಹಿತೆ ಇರುವುದರಿಂದ ಈ ಕಾರ್ಯದಲ್ಲಿ ಸ್ವಲ್ಪ ವಿಳಂಬವಾಗುತ್ತಿದೆ. ಆದರೆ ಎಲ್ಲಿ ಅನಿವಾರ್ಯತೆ ಇದೆಯೋ ಅಲ್ಲಿ ಬೋರ್ವೆಲ್ಗಳ ವ್ಯವಸ್ಥೆ ಮಾಡಲಾಗುವುದು. ಟ್ಯಾಂಕರ್ ಮೂಲಕ ಹಳ್ಳಿಗಳಿಗೆ ನೀರನ್ನು ಪೂರೈಸಲಾಗುವುದು. ಬೇರೆ ಕಡೆಗಳಲ್ಲಿ ಈಗಾಗಲೇ ಮಳೆಯಾಗಿದ್ದರೂ, ನಮ್ಮಲ್ಲಿ ಇನ್ನೂ ಮಳೆ ಬಂದಿಲ್ಲ. ಹಾಗಾಗಿ ನೀರಿನ ಸಮಸ್ಯೆ ತಲೆದೋರಿದೆ ಸಚಿವ ಖಾದರ್ ತಿಳಿಸಿದರು.
ಈ ಸಮಸ್ಯೆ ಜೂನ್ 15 ರ ತನಕ ಇರುತ್ತದೆ. ನಂತರ ಹೆಚ್ಚಿನ ಮಳೆಯಿಂದ ಪ್ರಕೃತಿ ವಿಕೋಪ ಆಗುವ ಪರಿಸ್ಥಿತಿ ನಮ್ಮ ಜಿಲ್ಲೆಯಲ್ಲಿದೆ. ಅದಕ್ಕೂ ನಮ್ಮ ಜಿಲ್ಲಾಡಳಿತ ಸಜ್ಜಾಗಬೇಕಾಗಿದೆ. ಮಂಗಳೂರಿನ ಮುಳುಗಡೆಯಾಗುವ ಪ್ರದೇಶವನ್ನು ಗುರುತಿಸಿ, ರಾಷ್ಟ್ರೀಯ ಪ್ರಕೃತಿ ವಿಕೋಪ ಸಂಸ್ಥೆಗೆ ಈ ಬಗ್ಗೆ ಅರ್ಜಿ ನೀಡಲಾಗಿದೆ. ಅವರು ಕೂಡಾ ವೀಕ್ಷಣೆ ಮಾಡಲು ಬರುತ್ತಿದ್ದಾರೆ. ಸದ್ಯದಲ್ಲಿಯೇ ಸಂಪಾಜೆಯ ಬಗ್ಗೆ ಒಂದು ಸಭೆ ನಡೆಸಲಿದ್ದೇವೆ. ಕಳೆದ ಬಾರಿ ಮಳೆಗಾಲದಲ್ಲಿ ಇಲ್ಲಿ ಭಾರಿ ಅನಾಹುತಗಳಾಗಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗುವುದು. ಅಲ್ಲದೆ ಕಳೆದ ಬಾರಿ ಪ್ರಕೃತಿ ವಿಕೋಪ ಆದ ಪ್ರದೇಶಗಳ ಜನರನ್ನು ಕರೆದು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು. ಹಾಗೆಯೇ ಎನ್ಡಿಆರ್ಎಫ್ ಜಿಲ್ಲೆಗೆ ಬರುತ್ತಿದ್ದು, ಸುಳ್ಯದಲ್ಲೇ ಕ್ಯಾಂಪ್ ಮಾಡಲು ಸೂಚಿಸಲಾಗಿದೆ ಎಂದು ಖಾದರ್ ಮಾಹಿತಿ ನೀಡಿದರು.
ಈ ಸಂದರ್ಭ ಮಾಜಿ ಶಾಸಕ ಜೆ.ಆರ್. ಲೋಬೊ, ಮುಖ್ಯಮಂತ್ರಿ ಅವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಮಾಜಿ ಮೇಯರ್ ಭಾಸ್ಕರ್ ಕೆ, ಶಶಿಧರ್ ಹೆಗ್ಡೆ ಸೇರಿದಂತೆ ಮತ್ತಿತರರು ನಿಯೋಗದಲ್ಲಿದ್ದರು.