ಮಂಗಳೂರು: ಮುಜರಾಯಿ ದೇವಸ್ಥಾನಗಳ ಪೈಕಿ ಅತೀ ಶ್ರೀಮಂತ ದೇವಾಲಯವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಈ ಬಾರಿ ವಾರ್ಷಿಕವಾಗಿ 92.09 ಕೋಟಿ ಆದಾಯ ಗಳಿಸಿಕೊಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ವಾರ್ಷಿಕ ಆದಾಯದಲ್ಲಿ ಕಡಿಮೆಯಾಗಿದೆ. ಆದರೂ ರಾಜ್ಯದ ಮುಜರಾಯಿ ಇಲಾಖೆಯಲ್ಲಿ ಶ್ರೀಮಂತ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಳೆದ ಏಳು ವರ್ಷಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯ ಗಣನೀಯವಾಗಿ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಲೆ ಬಂದಿದೆ. 2006-07 ರಲ್ಲಿ 19.76 ಕೋಟಿ, 2007-08ರಲ್ಲಿ 24.44 ಕೋಟಿ, 2008-09 ರಲ್ಲಿ 31 ಕೋಟಿ, 2009-10 ರಲ್ಲಿ 38.51 ಕೋಟಿ, 2011-12 ರಲ್ಲಿ56.24 ಕೋಟಿ, 2012-13 ರಲ್ಲಿ 66.76 ಕೋಟಿ, 2013-14 ರಲ್ಲಿ 68 ಕೋಟಿ, 2014-15 ರಲ್ಲಿ 77.60ಕೋಟಿ,2015-16 ರಲ್ಲಿ 88.83 ಕೋಟಿ, 2016-17 ರಲ್ಲಿ 89.65 ಕೋಟಿ, 2017-18 ರಲ್ಲಿ 94.92 ಕೋಟಿ ಆದಾಯ ಗಳಿಸಿತ್ತು.
ಆದರೆ, ಕಳೆದ ವರ್ಷದ ಆದಾಯಕ್ಕಿಂತ 3.83 ಕೋಟಿ ಕಡಿಮೆಯಾಗಿ ಈ ಬಾರಿ 92.09 ಕೋಟಿ ಹಣ ಸಂಗ್ರಹವಾಗಿದೆ. ಈ ಬಾರಿ ಕ್ಷೇತ್ರದಲ್ಲಿ ಸರ್ಪ ಸಂಸ್ಕಾರ ಹರಕೆ, ಬ್ರಹ್ಮರಥ- ಆಶ್ಲೇಷಾ ಬಲಿ ಸೇವೆಗಳ ಜತೆಗೆ ತುಲಾಭಾರ, ಶೇಷಸೇವೆ , ಪಂಚಾಮೃತ, ಮಹಾಭಿಷೇಕ ಇತ್ಯಾದಿ ಸೇವೆ ಏರಿಕೆಯಾಗಿದೆ. ಹರಕೆ, ಸೇವೆಗಳು, ಕಾಣಿಕೆ ಹುಂಡಿ, ಛತ್ರ ಮತ್ತು ಕಟ್ಟಡಗಳ ಬಾಡಿಗೆ ಮತ್ತು ಕೃಷಿ ದೇವಾಲಯದ ಆದಾಯ ಮೂಲಗಳಾಗಿದ್ದು, ಇವೆಲ್ಲವುಗಳಿಂದ ಬಂದ ಆದಾಯ 92.09 ಕೋಟಿಯಾಗಿದೆ.
ಕುಕ್ಕೆ ಕ್ಷೇತ್ರದ ಅಭಿವೃದ್ಧಿಗೆ 180 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆ ಅಭಿವೃದ್ಧಿ ಗೆ 68 ಕೋಟಿ ರೂ ಹಣವನ್ನು ಲೋಕೋಪಯೋಗಿ ಇಲಾಖೆಯಲ್ಲಿ ಠೇವಣಿ ಇರಿಸಲಾಗಿದೆ. ಇದು ಸೇರಿದಂತೆ ಭಕ್ತರ ಅನುಕೂಲತೆಗಾಗಿ 73 ಕೋಟಿ ರೂ. ಆಡಳಿತ ಮಂಡಳಿ ಠೇವಣಿಯಾಗಿ ಹೊಂದಿದೆ. ಈ ಹಣಕ್ಕೆ ಬಡ್ಡಿ ದೊರಕುತ್ತಿದ್ದರೆ ವಾರ್ಷಿಕ ಆದಾಯದಲ್ಲಿ ಹೆಚ್ಚಳವಾಗಿ ಈ ಬಾರಿಯೂ ಕಳೆದ ಬಾರಿಗಿಂತ ಜಾಸ್ತಿ ಆದಾಯ ಆಗುತ್ತಿತ್ತು. ಕಳೆದ ಮಳೆಗಾಲದಲ್ಲಿ ಪಶ್ಚಿಮ ಘಟ್ಟದಲ್ಲಿ ರಸ್ತೆ ಸಂಪರ್ಕ ಕಡಿತವಾಗಿ ಭಕ್ತರ ಆಗಮನ ಸಾಧ್ಯವಾಗಿರಲಿಲ್ಲ. ಇದು ಕೂಡ ಆದಾಯದ ಮೇಲೆ ಪರಿಣಾಮ ಬೀರಿದೆ ಎಂದು ಕುಕ್ಕೆ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.