ಮಂಗಳೂರು: ನಗರದ ಮೀನುಗಾರಿಕಾ ಧಕ್ಕೆಯಲ್ಲಿ ಬೋಟ್ ಮೂಲಕ ಮೀನುಗಾರಿಕೆಗೆ ಎಂದು ತೆರಳಿರುವ ಯುವಕರೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ತಮಿಳುನಾಡು ಮೂಲದ ವೆಲ್ ಮುರುಗನ್ (24) ನಾಪತ್ತೆಯಾದವರು. ಕಳೆದ ನಾಲ್ಕು ತಿಂಗಳಿನಿಂದ ಮುರುಗನ್ ನಗರದ ಮೀನುಗಾರಿಕಾ ಧಕ್ಕೆಯಲ್ಲಿ ಆಳ ಸಮುದ್ರ ಮೀನುಗಾರಿಕೆ ಮಾಡುವ ವೃತ್ತಿ ನಿರ್ವಹಿಸುತ್ತಿದ್ದರು.
ಅ. 24 ರಂದು ರಾತ್ರಿ 10:30ಕ್ಕೆ ಅಲ್ ಕೌಸರ್ ಎಂಬ ಬೋಟ್ನಲ್ಲಿ ವೇಲ್ ಮುರುಗನ್ ಮೀನುಗಾರಿಕೆಗೆ ಎಂದು ತೆರಳಿದ್ದರು. ಧಕ್ಕೆಯಿಂದ ಹೊರಟ್ಟಿದ್ದ ಈ ಬೋಟ್ನಲ್ಲಿ ಒಟ್ಟು 10 ಮಂದಿ ಇದ್ದರು. ರಾತ್ರಿ 11:15 ರ ವೇಳೆಗೆ ವೆಲ್ ಮುರುಗನ್ ಏಕಾಏಕಿ ನಾಪತ್ತೆಯಾಗಿದ್ದಾರೆ.
ಜತೆಗಿದ್ದವರು ಟಾರ್ಚ್ ಹಾಕಿ ಸುತ್ತ ಮುತ್ತಲಿನ ಸಮುದ್ರದಲ್ಲಿ ಹುಡುಕಾಡಿದರೂ ಆತ ಪತ್ತೆಯಾಗಿರಲಿಲ್ಲ. ಬೋಟ್ ಸಮುದ್ರದಲ್ಲಿ ಸಾಗುತ್ತಿದ್ದಾಗ ಅಲೆಗಳ ಅಬ್ಬರಕ್ಕೆ ವೆಲ್ ಮುರುಗನ್ ಬೋಟ್ನಿಂದ ಸಮುದ್ರದ ನೀರಿಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಓದಿ: ಆಟೋದಲ್ಲಿ ಬಿಟ್ಟು ಹೋದ ಬ್ಯಾಗ್ ಹಿಂದಿರುಗಿಸಿ ಮಾನವೀಯತೆ ಮೆರೆದ ಚಾಲಕ..