ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರು ಇಂದು ಕುಟುಂಬ ಸಮೇತರಾಗಿ ಕಡಬ ತಾಲೂಕಿನ ಕುಕ್ಕೆಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದರು. ಇಲ್ಲಿನ ಪವಿತ್ರ ಪೂಜೆಗಳಲ್ಲಿ ಒಂದಾದ ಆಶ್ಲೇಷ ಬಲಿ ಪೂಜೆಯನ್ನು ಅವರು ಸಲ್ಲಿಸಿದರು.
![Supreme Court Judge Abdul Nazeer Special Worship In Dakshina Kannada](https://etvbharatimages.akamaized.net/etvbharat/prod-images/kn-dk-02-judgevisit-brk-pho-kac10008_27122021144234_2712f_1640596354_953.jpg)
ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು ನ್ಯಾಯಮೂರ್ತಿಗಳಿಗೆ ವಿಶೇಷ ಗೌರವ ಸಲ್ಲಿಸಿದರು. ಡಿ.26ರ ರಾತ್ರಿ 8.10ಕ್ಕೆ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ಜಸ್ಟೀಸ್ ಎಸ್.ಅಬ್ದುಲ್ ನಜೀರ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಪುತ್ತೂರಿನಲ್ಲಿ ಬಾರ್ ಅಸೋಸಿಯೇಷನ್ನ ಕಟ್ಟಡದ ಉದ್ಘಾಟನೆ, ಕೋರ್ಟ್ ಕಟ್ಟಡದ ಎರಡನೇ ಹಂತದ ಕಟ್ಟಡ ಹಾಗೂ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ವಸತಿ ಸಮುಚ್ಚಯ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಸೇರಿದಂತೆ ಹಲವು ಕಾರ್ಯಕ್ರಗಳಲ್ಲಿ ಅವರು ಭಾಗಿಯಾಗಲಿದ್ದಾರೆ.
ಇಂದು ಸಂಜೆ ಬೆಳ್ತಂಗಡಿಯಿಂದ ನಿರ್ಗಮಿಸಿ ರಾತ್ರಿ 7.30ಕ್ಕೆ ಮೂಡುಬಿದ್ರಿಗೆ ಆಗಮಿಸಿ ಇಲ್ಲಿನ ತನ್ನ ಸ್ವಗೃಹದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಜನವರಿ 1ರ ಬೆಳಗ್ಗೆ 11.25ಕ್ಕೆ ಮಂಗಳೂರಿನಿಂದ ವಿಮಾನದ ಮೂಲಕ ಮತ್ತೆ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.
ಮೂಲತಃ ದಕ್ಷಿಣಕನ್ನಡ ಜಿಲ್ಲೆಯವರು: ಜಸ್ಟೀಸ್ ಎಸ್.ಅಬ್ದುಲ್ ನಜೀರ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಬೆಳುವಾಯಿಯ ಕಾನದವರು. ಸದ್ಯ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅಯೋಧ್ಯೆ ತೀರ್ಪು ನೀಡಿದ ಬಳಿಕ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರಿಗೆ ಜೀವ ಬೆದರಿಕೆ ಇದೆ ಎಂಬ ಗುಪ್ತಚರ ಸಂಸ್ಥೆಗಳ ಮಾಹಿತಿ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಸಿಆರ್ಪಿಎಫ್ ಮತ್ತು ಸ್ಥಳೀಯ ಪೊಲೀಸರಿಂದ ಬಂದೋಬಸ್ತ್ಗೆ ಆದೇಶ ನೀಡಿತ್ತು.
![Supreme Court Judge Abdul Nazeer Special Worship In Dakshina Kannada](https://etvbharatimages.akamaized.net/etvbharat/prod-images/kn-dk-02-judgevisit-brk-pho-kac10008_27122021144234_2712f_1640596354_546.jpg)
ಬಳಿಕ ಕೇಂದ್ರ ಸರ್ಕಾರವು ಅವರಿಗೆ ಝಡ್+ ಕೆಟಗರಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ರಾಜ್ಯದ ಕೋಟಾದಡಿ ಅವರಿಗೆ ಈ ಭದ್ರತೆ ಲಭ್ಯವಿದ್ದು, ಬೆಂಗಳೂರು, ಮಂಗಳೂರು ಸಹಿತ ಇತರ ಕಡೆಗಳಲ್ಲಿ ಭೇಟಿ ಸಂದರ್ಭದಲ್ಲಿ ಭದ್ರತೆಯನ್ನು ಅವರಿಗೆ ಒದಗಿಸಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದ ವೇಳೆ ಅವರು ಆಗಮಿಸುವ ಎಲ್ಲಾ ಕಡೆಗಳಲ್ಲಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದ್ದು, ಹೆಚ್ಚಿನ ಸೆಕ್ಯೂರಿಟಿ ನೀಡಲಾಗುತ್ತಿದೆ. ನ್ಯಾಯಮೂರ್ತಿಗಳ ಪೂಜಾ ಕಾರ್ಯಗಳ ಛಾಯಾಚಿತ್ರಕ್ಕೆ ನಿರ್ಬಂಧ ಹೇರಲಾಗಿತ್ತು.
ಇದನ್ನೂ ಓದಿ: 2021ರಲ್ಲಿ ಬಿಜೆಪಿ ಸರ್ಕಾರಕ್ಕೆ ಸುತ್ತಿಕೊಂಡವು ಹಗರಣಗಳ ಸರಮಾಲೆ, ಭಿನ್ನಮತೀಯ ಚಟುವಟಿಕೆ ಕುರಿತ ಪಕ್ಷಿನೋಟ..