ಪುತ್ತೂರು: ನಗರದಲ್ಲಿ ಅನಗತ್ಯ ವಾಹನ ಸಂಚಾರ ತಡೆಯುವಲ್ಲಿ ಸಫಲರಾಗಿರುವ ಪುತ್ತೂರು ಪೊಲೀಸರು ಇಲ್ಲಿನ ಮುಖ್ಯರಸ್ತೆಯನ್ನು ಸಂಪರ್ಕಿಸುವ 8 ಒಳ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಈ ಮೂಲಕ ಖಾಸಗಿ ವಾಹನಗಳ ಓಡಾಟ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪುತ್ತೂರು ಎಪಿಎಂಸಿ ರಸ್ತೆಯ ರೈಲ್ವೇ ಗೇಟ್ ಬಳಿಯೂ ಬ್ಯಾರಿಕೇಡ್ ಅಳವಡಿಸಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದ ಎಪಿಎಂಸಿಗೆ ಬರುವ ಜನತೆ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಸಾಲ್ಮರದ ಮೂಲಕ ಬರಬೇಕಾಗಿದೆ. ಪುತ್ತೂರು ಎಪಿಎಂಸಿಯ ರೈತಭವನದಲ್ಲಿ ಕಳೆದ ಕೆಲ ದಿನಗಳಿಂದ ಬಡಜನತೆಗೆ ಪಡಿತರ ಸಾಮಾಗ್ರಿಗಳ ವಿತರಣೆಯಾಗುತ್ತಿದ್ದು, ಈ ಸಾಮಾಗ್ರಿಗಳನ್ನು ಗ್ರಾಮಮಟ್ಟದಲ್ಲಿ ವಿತರಿಸಲಾಗುತ್ತಿದೆ.
ಗ್ರಾಮ ಮಟ್ಟಕ್ಕೆ ಆಹಾರ ಸಾಮಾಗ್ರಿಗಳನ್ನೊಯ್ಯಲು ಇದರಿಂದ ಸಮಸ್ಯೆ ಉಂಟಾಗುತ್ತಿದೆ ಎಂಬ ದೂರುಗಳು ಜನತೆಯಿಂದ ವ್ಯಕ್ತವಾಗಿದೆ. ಶಾಸಕ ಸಂಜೀವ ಮಠಂದೂರು ಅವರೂ ಕೂಡ ಈ ರಸ್ತೆಯನ್ನು ಸಂಪೂರ್ಣ ಬಂದ್ ಮಾಡುವ ಬದಲು ಅಗತ್ಯ ಸಂದರ್ಭದಲ್ಲಿ ಬ್ಯಾರಿಕೇಡ್ ತೆಗೆಯುವ ವ್ಯವಸ್ಥೆ ಮಾಡುವುದು ಉತ್ತಮ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಡಿವೈಎಸ್ಪಿ ದಿನಕರ್ ಶೆಟ್ಟಿ ಅವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಗುಟ್ಕಾ ಬೆಲೆ ಅಧಿಕ:
ಲಾಕ್ಡೌನ್ ಹಿನ್ನೆಲೆಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಸಾಮಾಗ್ರಿಗಳ ಬೆಲೆ ಅಧಿಕಗೊಂಡಿದೆ. ಜನತೆಗೆ ಅಗತ್ಯವಾದ ಮೆಣಸು, ಕೊತ್ತಂಬರಿ, ಬೆಳ್ಳುಳ್ಳಿ, ಈರುಳ್ಳಿ ಮತ್ತಿತರ ಬೆಲೆಗಳು ಗಗನಕ್ಕೇರಲಾರಂಭಿಸಿದೆ. ಇದರ ಜತೆಗೆ ಗುಟ್ಕಾ ಬೆಲೆಯೂ ಹೆಚ್ಚಾಗಿದೆ. ಕೆಲವರು ಈ ಗುಟ್ಕಾವನ್ನು ಕಾಳಸಂತೆಯಲ್ಲಿ ಮಾರುತ್ತಿದ್ದು ದುಪ್ಪಟ್ಟು ಬೆಲೆಗೆ ಮಾರಾಟ ನಡೆಸುತ್ತಿದ್ದಾರೆ.
ರೈತರಿಗೆ ಸಮಸ್ಯೆ:
ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ರೈತರಿಗೆ ಅತ್ಯಗತ್ಯವಾಗಿದ್ದು, ಇಲ್ಲಿ ಕಳೆದೆರಡುವಾರಗಳಿಂದ ವಾರದಸಂತೆಯೂ ನಡೆಯುತ್ತಿದೆ. ಇದೀಗ ಸಂಕಷ್ಟಕ್ಕೀಡಾಗಿರುವ ರೈತ ವರ್ಗ ತಾವು ಬೆಳೆದ ಅಡಿಕೆಯನ್ನು ಎಪಿಎಂಸಿ ದಾಸ್ತಾನು ಕೊಠಡಿಯಲ್ಲಿಟ್ಟು ಶೇ.60 ಹಣವನ್ನು ಮುಂಗಡವಾಗಿ ಪಡೆಯಲು ಅವಕಾಶ ಕಲ್ಪಿಸಿದೆ. ಇದರಿಂದ ಎಪಿಎಂಸಿಗೆ ಬರುವ ರೈತರಿಗೆ ರೈಲ್ವೇ ಗೇಟ್ನಲ್ಲಿ ಬಂದ್ ಮಾಡಿದ ಕಾರಣ ಸಮಸ್ಯೆ ಉಂಟಾಗಿದೆ.