ದಕ್ಷಿಣ ಕನ್ನಡ: ಪೊಲೀಸರೆಂದರೆ ಅಪರಾಧ ಮಾಡಿದವರನ್ನು ಮಟ್ಟ ಹಾಕಲು ಶ್ರಮಿಸಿ ಸಮಾಜ ಸುಧಾರಿಸುವವರು. ಆದರೆ, ಕಡಬ ಠಾಣೆಯ ಪೊಲೀಸ್ ಸಿಬ್ಬಂದಿಯೊಬ್ಬರು ಶಾಲೆಯಿಂದ ಹೊರ ಉಳಿದ ಮೂರು ಮಕ್ಕಳನ್ನು ಮನವೊಲಿಸಿ ಶಾಲೆಗೆ ಸೇರಿಸುವ ಮಾದರಿ ಕೆಲಸವೊಂದನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.
ಕಳೆದ ಕೆಲವು ಸಮಯಗಳಿಂದ ಕಾಣಿಯೂರು ಗ್ರಾಪಂ ವ್ಯಾಪ್ತಿಯ ಚಾರ್ವಾಕದ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಸುಶ್ಮಿತಾ ಮತ್ತು ಪ್ರಮೋದ್ ಹಾಗೂ ಸುಜಿತ್ ಎಂಬ ಮೂವರು ಮಕ್ಕಳು ಶಾಲೆಯಿಂದ ದೂರ ಉಳಿದಿದ್ದರು. ಶಾಲಾ ಮುಖ್ಯ ಶಿಕ್ಷಕಿ ಹಲವು ಬಾರಿ ಆ ಮಕ್ಕಳ ಮನೆಗೆ ತೆರಳಿ ಮಕ್ಕಳು ಶಾಲೆಗೆ ಬರುವಂತೆ ನಿರಂತರವಾಗಿ ಹೆತ್ತವರಿಗೆ ತಿಳಿ ಹೇಳಿದ್ದರು. ಆದರೆ, ಮಕ್ಕಳು ಶಾಲೆಗೆ ಬರಲೇ ಇಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಶಾಲಾ ಮುಖ್ಯಸ್ಥರು ಕಡಬ ಠಾಣೆಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಚಾರ್ವಾಕ ಬೀಟ್ ಪೋಲೀಸ್ ಭವಿತ್ ರೈ ಅವರು ಶಾಲೆಯಿಂದ ಹೊರ ಉಳಿದ ಮಕ್ಕಳ ಮನೆಗೆ ಹೋಗಿ ಹೆತ್ತವರಿಗೆ ಶಿಕ್ಷಣದ ಅಗತ್ಯತೆಯ ಬಗ್ಗೆ ಅರಿವು ಮೂಡಿಸಿದರಲ್ಲದೆ, ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಲೆಯಲ್ಲಿರುವ ಸವಲತ್ತು ಮತ್ತು ವಿದ್ಯಾಭ್ಯಾಸದ ಅವಕಾಶಗಳನ್ನು ವಿವರಿಸಿದ್ದಾರೆ. ನೀವು ಹೆಚ್ಚು ಓದಿ ಉದ್ಯೋಗಕ್ಕೆ ಸೇರಿ ನನ್ನಂತೆಯೇ ಖಾಕಿ ಧರಿಸಿ ಲಾಠಿ ಹಿಡಿದು ಬರಬೇಕು ಎಂದು ಪೊಲೀಸ್ ಸೇವೆಯ ಅಗತ್ಯ ವಿವರಿಸಿ ಮಕ್ಕಳಲ್ಲಿ ಹೊಸ ಉತ್ಸಾಹ ತುಂಬಿದ್ದಾರೆ. ಇದರಿಂದ ಸಂತೋಷಗೊಂಡ ಮಕ್ಕಳು ಶಾಲೆಗೆ ಹೋಗಲು ನಿರ್ಧರಿಸಿದ್ದು, ಶುಕ್ರವಾರದಂದು ಮತ್ತೆ ಶಾಲೆಯ ಮೆಟ್ಟಿಲೇರಿದ್ದಾರೆ.
ಈ ಕಾರ್ಯದಲ್ಲಿ ಭವಿತ್ ಅವರಿಗೆ ಮುಖ್ಯ ಶಿಕ್ಷಕಿ ಪಾರ್ವತಿ, ಶಾಲಾ ಅಭಿವೃದ್ದಿ ಸಮಿತಿಯವರು, ಶಿಕ್ಷಕರಾದ ಶಂಕರ ಹಾಗೂ ನಯನಾಕುಮಾರಿ ಸಹಕರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಭವಿತ್ ರೈ, ನಾನು ಮಕ್ಕಳಿಗೆ ಶಿಕ್ಷಣದ ಬಗ್ಗೆ ವಿವರಿಸಿದಲ್ಲದೆ, ನಿಮ್ಮಂತೆ ಮಕ್ಕಳೂ ಕೂಡ ಕೂಲಿ ಕೆಲಸ ಮಾಡಬಾರದು. ಬದಲಿಗೆ ಉನ್ನತ ಸ್ಥಾನಕ್ಕೆ ಹೋಗಿ ಹೆಮ್ಮೆ ತರಬೇಕು ಎಂದು ಹೆತ್ತವರಿಗೂ ಮನವರಿಕೆ ಮಾಡಿದ್ದೇನೆ. ಇಂತಹ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದಿದ್ದಾರೆ. ಪೊಲೀಸ್ ಸಿಬ್ಬಂದಿಯ ಈ ಕೆಲಸ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಗಳಿಸಿದೆ.