ಸುಳ್ಯ(ದಕ್ಷಿಣ ಕನ್ನಡ): ತಾಲೂಕು ಕಚೇರಿಯ ಸಿಬ್ಬಂದಿಯ ಎಡವಟ್ಟಿನಿಂದ ಕಳೆದ ಹಲವು ತಿಂಗಳು ಇನ್ನೊಬ್ಬರ ಖಾತೆಗೆ ಜಮೆಯಾಗುತ್ತಿದ್ದ ವಿಶೇಷ ಚೇತನರೊಬ್ಬರ ವಿಕಲಚೇತನ ವೇತನವು ಫಲಾನುಭವಿಯ ಖಾತೆಗೆ ಮರು ಜಮೆಯಾಗಿದೆ.
ಈಟಿವಿ ಭಾರತ ವಿಕಲ ಚೇತನ ಲಕ್ಷ್ಮಣ ಗೌಡ ಅವರನ್ನು ಭೇಟಿಯಾಗಿ ಘಟನೆಯ ಬಗೆಗಿನ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಆನಂತರ ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಅವರು ಬ್ಯಾಂಕಿಗೆ ಪತ್ರ ಬರೆದು ಜಮೆಯಾದ ಹಣ ವಾಪಸ್ಸು ನೀಡುವ ಸಂಬಂಧ ಕ್ರಮಕೈಗೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದ್ದರು. ಅಂತೆಯೇ ಫಲಾನುಭವಿ ಚಾರ್ವಾಕ ಗ್ರಾಮದ ಬೊಮ್ಮಳಿಕೆ ಲಕ್ಷ್ಮಣ ಗೌಡ ಅವರ ಖಾತೆಗೆ ಸದ್ಯ ವೇತನ ಹಣ ವಾಪಸ್ಸಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಲಕ್ಷ್ಮಣ ಗೌಡರ ಹಣ ಕುಸುಮಾಧರ ಗೌಡ ಎಂಬುವರ ಖಾತೆಯಲ್ಲಿ ಜಮೆ ಆಗುತ್ತಿತ್ತು. ಕಡಬ ತಹಶೀಲ್ದಾರರಾದ ಜಾನ್ ಪ್ರಕಾಶ್ ರೋಡ್ರಿಗಸ್ ಅವರು ಬ್ಯಾಂಕಿಗೆ ಪತ್ರ ಬರೆದ ಹಿನ್ನೆಲೆ ಬ್ಯಾಂಕ್ ಮುಖ್ಯಸ್ಥರ ಸಮ್ಮುಖದಲ್ಲಿ ಕುಸುಮಾಧರ ಗೌಡ ಚೆಕ್ ಮುಖಾಂತರ ಫಲಾನುಭವಿಯ ಖಾತೆಗೆ 6000 ರೂಪಾಯಿ ಜಮೆ ಮಾಡಿದ್ದಾರೆ.
ಲಕ್ಷ್ಮಣ ಗೌಡರಿಗೆ ಜಮೆಯಾಗಬೇಕಾದ ಪ್ರತಿ ತಿಂಗಳ ರೂಪಾಯಿ 600 ವೇತನವು ಸಿಬ್ಬಂದಿ ಎಡವಟ್ಟಿನಿಂದ ಬೇರೊಬ್ಬರ ಖಾತೆಗೆ ಜಮೆಯಾಗಿತ್ತು. ಈ ಖಾತೆದಾರರ ವಿಳಾಸವನ್ನು ಬ್ಯಾಂಕಿನಿಂದ ಪಡೆದು ಲಕ್ಷ್ಮಣ ಗೌಡರು ಖಾತೆದಾರ ಕುಸುಮಾಧರ ಗೌಡರನ್ನು ಸಂಪರ್ಕಿಸಿದ್ದರು. ಅಲ್ಲದೆ ಅವರ ಸಂಪರ್ಕ ಸಂಖ್ಯೆಯನ್ನು ಕಡಬ ತಾಲೂಕು ಕಚೇರಿಗೂ ನೀಡಿದ್ದರು. ಆದರೂ ಕಚೇರಿಯಿಂದ ಯಾವುದೇ ಸ್ಪಂದನೆ ದೊರೆತ್ತಿರಲಿಲ್ಲ. ಈ ಬಗ್ಗೆ ಈಟಿವಿ ಭಾರತ ಲಕ್ಷ್ಮಣಗೌಡ ಅವರನ್ನು ಭೇಟಿಯಾಗಿ ವಿಸ್ತೃತ ವರದಿ ಬಿತ್ತರ ಮಾಡಿತ್ತು.