ಮಂಗಳೂರು (ದಕ್ಷಿಣ ಕನ್ನಡ): ವ್ಯಕ್ತಿಯೊಬ್ಬ ಮಹಿಳೆಯರಿಬ್ಬರನ್ನು ಉಪಾಯದಿಂದ ಗುಡ್ಡಕ್ಕೆ ಕರೆದುಕೊಂಡು ಹೋಗಿ ಕತ್ತು ಬಿಗಿದು ಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ನೇರೋಳ್ತಡ್ಕ ಸಮೀಪ ಮಂಗಳವಾರ ನಡೆದಿದೆ. ಈ ಸಂಬಂಧ ಸುಳ್ಯದ ಆರೋಪಿ ಸುರೇಶ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಸಂಪ್ಯ ಠಾಣೆ ಪೊಲೀಸರು ತಿಳಿಸಿದ್ದಾರೆ.
ಬಡಗನ್ನೂರು ಗ್ರಾಮದ ನೇರೋಳ್ತಡ್ಕ ಮೂಲೆಗದ್ದೆ ಬಾಣಪದವಿನ ಶಿಕ್ಷಕ ದಿವಂಗತ ವಾಸು ನಾಯ್ಕ ಅವರ ಪತ್ನಿ ಸುರೇಖಾ (54) ಮತ್ತು ಗೋಳಿತ್ತೊಟ್ಟುವಿನ ಗಿರಿಜಾ (52) ಹಲ್ಲೆಗೊಳಗಾದ ಮಹಿಳೆಯರಾಗಿದ್ದಾರೆ. ಗೋಳಿತ್ತೊಟ್ಟುವಿನ ಗಿರಿಜಾ ಅವರು ಸುರೇಖಾ ಅವರ ಮನೆಯಲ್ಲಿದ್ದುಕೊಂಡು ಕೂಲಿ ಕೆಲಸ ಮಾಡುತ್ತಿದ್ದರು. ಸುರೇಖಾ ಮನೆಗೆ ಆರೋಪಿ ಸುರೇಶ್ ಬಂದಿದ್ದ. ಬಳಿಕ ಸುರೇಶ್ ಸಮೀಪದ ಗುಡ್ಡದಲ್ಲಿ ಅಣಬೆಗಳು ಮೂಡಿವೆ ಎಂದು ನಂಬಿಸಿ, ಅಣಬೆಗಳನ್ನು ಕೀಳಲು ಗಿರಿಜಾ ಅವರನ್ನು ಕರೆದುಕೊಂಡು ಹೋಗಿದ್ದ.
ಮಹಿಳೆಯರ ಕೊಲೆಗೆ ಯತ್ನಿಸಿದ ಆರೋಪಿ: ಅಲ್ಲಿ ಮಹಿಳೆಯ ಕುತ್ತಿಗೆಗೆ ಬೈರಾಸಿನಿಂದ ಬಿಗಿದಿದ್ದ, ನೆಲಕ್ಕೆ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಅಲ್ಲೇ ಬಿಟ್ಟು ಮನೆಗೆ ಮರಳಿದ್ದ. ಬಳಿಕ ಸುರೇಖಾ ಬಳಿ, 'ಗಿರಿಜಾ ಅವರು ಅಸ್ವಸ್ಥಗೊಂಡು ಗುಡ್ಡೆಯಲ್ಲಿ ಬಿದ್ದಿದ್ದಾರೆ. ನೀರು ತೆಗೆದುಕೊಂಡು ಬನ್ನಿ' ಎಂದು ಹೇಳಿದ್ದಾನೆ. ಅದನ್ನು ನಂಬಿ ಸುರೇಖಾ ಆತನ ಜೊತೆ ಗುಡ್ಡಕ್ಕೆ ಧಾವಿಸಿದ್ದರು. ಆಗ ಆಕೆಯ ಕುತ್ತಿಗೆಗೂ ಬೈರಾಸಿನಿಂದ ಬಿಗಿದು ಕೊಲೆಗೆ ಯತ್ನಿಸಿದ್ದಾನೆ. ಮಹಿಳೆಯರ ಬೊಬ್ಬೆ ಕೇಳಿ ಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿದ್ದರು. ಆಗ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯರಿಬ್ಬರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಪುತ್ತೂರು ಬಡಗನ್ನೂರು ಗ್ರಾಮ ನಿವಾಸಿ ರವಿಚಂದ್ರ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು. ಕೆಲಸದಾಳು ಗಿರಿಜಾ ಮುಖ, ಎರಡೂ ಕಣ್ಣಿನ ಭಾಗಕ್ಕೆ ಗುದ್ದಿದ ರೀತಿಯ ಗಾಯವಾಗಿದೆ. ಅಲ್ಲದೆ, ಎಡ ಕಿವಿಯ ಒಡವೆಯನ್ನು ಕಿತ್ತು ಕಿವಿಯು ಹರಿದ ರೀತಿಯಲ್ಲಿ ಹಾಗೂ ತನ್ನ ಚಿಕ್ಕಮ್ಮ ಸುರೇಖಾ ಮುಖ, ಎರಡೂ ಕಣ್ಣಿನ ಭಾಗಕ್ಕೆ ಗುದ್ದಿದ ರೀತಿಯ ಗಾಯಗಳಾಗಿದೆ. ಇಬ್ಬರನ್ನೂ ಉಪಚರಿಸಿ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಎಚ್ಚರಗೊಂಡ ಸುರೇಖಾ ಘಟನೆಯ ಬಗ್ಗೆ ತಿಳಿಸಿದ್ದಾರೆ. ಆರೋಪಿ ಸುರೇಶ್ ನಾಯ್ಕ ಎಂಬಾತ ಸುರೇಖಾರ ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಲು ಈ ಕೃತ್ಯ ಎಸಗಿದ್ದಾನೆ ಎಂದು ರವಿಚಂದ್ರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಸಂಪ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಎಗ್ರೈಸ್ ಅಂಗಡಿ ಮಾಲೀಕನ ಮೇಲೆ ಹಲ್ಲೆ ಯತ್ನ, ರೌಡಿಶೀಟರ್ ಬಂಧನ