ಪುತ್ತೂರು : ಕೊರೊನಾ ಸಂದರ್ಭದಲ್ಲಿ ಕಾಂಗ್ರೆಸ್ನ ರಾಜಕೀಯ ಬೇಳೆ ಬೇಯುವುದಿಲ್ಲ ಎಂದು ಶಾಸಕ ಸಂಜೀವ ಮಠಂದೂರು ಟೀಕಿಸಿದ್ದಾರೆ.
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿ, ಕೋವಿಡ್ ಸಂದಿಗ್ಥ ಪರಿಸ್ಥಿತಿಯಲ್ಲೂ ಆರ್ಥಿಕ ದೃಢತೆಯನ್ನು ಕಾಪಾಡುವ ಕೆಲಸ ದೇಶ ಮಾಡಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಂದು ಎಲ್ಲರಿಗೂ ತಿಳಿದ ವಿಚಾರ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ನ ರಾಜಕೀಯ ಬೇಳೆ ಬೇಯುವುದಿಲ್ಲ ಎಂದರು.
ಅಭಿವೃದ್ಧಿ ಕಾರ್ಯಗಳು ಎಲ್ಲ ಕಡೆಯಿಂದ ನಿರಂತರವಾಗಿ ನಡೆಯುತ್ತಿದೆ. ಎಲ್ಲಿಯೂ ಕುಂಠಿತವಾಗಿಲ್ಲ. ಈ ನಡುವೆ ಜನರ ಮನಸ್ಸು ಡೈವರ್ಟ್ ಮಾಡಲು ಬೆಲೆ ಏರಿಕೆ ನೆಪದಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಕಾಂಗ್ರೆಸ್ ಈ ದೇಶದಲ್ಲಿ ಹೆಚ್ಚಿನ ಅವಧಿ ಆಡಳಿತ ಮಾಡಿ ಭ್ರಷ್ಟಾಚಾರ ಮತ್ತು ಹಣದುಬ್ಬರಕ್ಕೆ ಎಷ್ಟು ಕೊಡುಗೆ ಕೊಟ್ಟಿದೆ ಎಂದು ಜನ ಈಗಾಗಲೇ ತೀರ್ಮಾನ ಮಾಡಿದ್ದಾರೆ. 2012 ರಲ್ಲಿ ದೇಶದಲ್ಲಿ ತೈಲ ಬೆಲೆ 80 ರೂ. ದಾಟಿತ್ತು. ಆಗ ಯಾವುದೇ ಕೊರೊನಾ ಸಮಸ್ಯೆ ಇರಲಿಲ್ಲ. ಇವತ್ತು ಕೋವಿಡ್ ಸಮಸ್ಯೆ ಎದುರಾದಾದ ಹಿನ್ನೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಧಾರಣೆ ಏರಿಳಿತವಾಗಿ ಸ್ವಲ್ಪ ಬೆಲೆ ವ್ಯತ್ಯಾಸ ಆಗಿದೆ ಎಂದು ಹೇಳಿದರು.
ರಮಾನಾಥ ರೈಯವರೇ ನಿಮ್ಮ ಆರೋಗ್ಯ ಕಾಪಾಡಿ, ಮನೆಯಲ್ಲೇ ಸುರಕ್ಷಿತವಾಗಿರಿ:
ರಮಾನಾಥ ರೈ ಅವರು ಹಲವು ವರ್ಷಗಳ ಕಾಲ ಸಚಿವರಾಗಿದ್ದವರು. ಇತರರಿಗೆ ಬುದ್ದಿವಾದ ಹೇಳುವ ಮತ್ತು ಬಹಳಷ್ಟು ಅನುಭವಿಗಳು. ಅವರಿಗೆ ಸಾಮಾನ್ಯ ಜ್ಞಾನ ಇದೆ ಎಂದು ನಾನು ಭಾವಿಸುತ್ತೇನೆ. ಕೋವಿಡ್ ಇರುವಾಗ ದೇಶದ ಆರ್ಥಿಕ ಸ್ಥಿತಿ ಹೇಗಿದೆ. ಜನ ಜೀವನ ಹೇಗಿದೆ ಎಂದು ಅವರಿಗೆ ಗೊತ್ತಿದೆ. ಅವರು ಆಡಳಿತ ಮಾಡುವಾಗ ಜನ ಜೀವನ ಹೇಗಿತ್ತು ಎಂದೂ ಅವರಿಗೆ ಗೊತ್ತಿದೆ. ಆದರೆ, ಅವರು ಈಗಿನ ಪರಿಸ್ಥಿತಿಯನ್ನು ಯಾವ ರೀತಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಸಾಮಾನ್ಯ ಜನರಿಗೂ ಅರ್ಥವಾಗಿದೆ.
ಹಾಗಾಗಿ ಬೀದಿಗಿಳಿದು ಪ್ರತಿಭಟನೆ ಮಾಡಿದರೆ ಇಲ್ಲಿನ ಜನರು ದಡ್ಡರಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಬುದ್ದಿವಂತರು. ತಾನು ಶಾಶ್ವತವಾಗಿ ಶಾಸಕ, ಮಂತ್ರಿಯಾಗಬೇಕೆಂಬ ಉದ್ದೇಶಕ್ಕೆ ಈ ರೀತಿಯ ಪ್ರತಿಭಟನೆ ಮಾಡುತ್ತಾರೆ ಎಂದು ಜನರು ಭಾವಿಸಿಕೊಂಡು ತಮ್ಮಷ್ಟಕ್ಕೆ ತಾವಿರುತ್ತಾರೆ. ಹಾಗಾಗಿ ರಮಾನಾಥ ರೈ ಅವರೇ ಇಂತಹ ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ಬೀದಿಗಿಳಿಯದೇ ನಿಮ್ಮ ಆರೋಗ್ಯ ಕಾಪಾಡಿ, ಮತ್ತು ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ಶಾಸಕ ಸಂಜೀವ ಮಠಂದೂರು ತಿರುಗೇಟು ನೀಡಿದರು.