ಬಂಟ್ವಾಳ: ಕಾಲ್ಬೆರಳ ಮೂಲಕ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನ ಸೆಳೆದಿದ್ದ ಕೌಶಿಕ್ ಎಂಬ ವಿದ್ಯಾರ್ಥಿಯ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಶಾಸಕ ರಾಜೇಶ್ ನಾಯ್ಕ್ ಹೊತ್ತಿದ್ದಾರೆ.
ಬಂಟ್ವಾಳದ ಕೌಶಿಕ್ ಎಸ್ಎಸ್ಎಲ್ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ಸುದ್ದಿಯಾಗಿದ್ದನು. ಇದೀಗ ಆತನ ಸಂಪೂರ್ಣ ವಿದ್ಯಾಭ್ಯಾಸದ ಹೊಣೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೊತ್ತಿದ್ದು, ಮೂಡುಬಿದಿರೆಯ ಆಳ್ವಾಸ್ ನ ಪಿಯುಸಿ ಕಾಮರ್ಸ್ ಗೆ ಸೇರಿಸಿದ್ದಾರೆ.
ಈ ಕುರಿತು ಮೂಡುಬಿದಿರೆಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರ ಜೊತೆ ಮಾತುಕತೆ ನಡೆಸಿದ ಶಾಸಕರು, ವಾಣಿಜ್ಯ ವಿಭಾಗದ ಶಿಕ್ಷಣಕ್ಕೆ ದಾಖಲಾತಿ ವ್ಯವಸ್ಥೆಗೆ ನೆರವಾದರು. ಕಾಲಿನ ಬೆರಳಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ರಾಜ್ಯದಲ್ಲಿ ಸುದ್ದಿಯಾದ ಸಂದರ್ಭದಲ್ಲಿ ಕೌಶಿಕ್ ನ ಫಲಿತಾಂಶ ನೋಡಿಕೊಂಡು ಆತನ ಇಚ್ಛೆಯ ವಿಷಯದಲ್ಲಿ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ವಹಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.