ಮಂಗಳೂರು: ಯುದ್ಧಪೀಡಿತ ಉಕ್ರೇನ್ನಿಂದ ಮರಳಿದ ವಿದ್ಯಾರ್ಥಿನಿಯೋರ್ವಳು ತಾನು ಸಾಕಿದ ಬೆಕ್ಕನ್ನು ತನ್ನ ಜೊತೆ ಕರೆ ತಂದಿದ್ದಾಳೆ.
ದೇರಳಕಟ್ಟೆಯ ಲಕ್ಷಿತಾ ಪುರುಷೋತ್ತಮ್ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ಗೆ ತೆರಳಿದ್ದಳು. ಆದರೆ ಉಕ್ರೇನ್ನಲ್ಲಿ ಆರಂಭವಾಗಿರುವ ಯುದ್ಧದಿಂದ ಎಲ್ಲಾ ಕನ್ನಡಿಗರು ತಾಯ್ನಾಡಿಗೆ ಮರಳುತ್ತಿದ್ದಾರೆ. ನಿನ್ನೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿದ್ದ ಯುವತಿ ಇಂದು ರಸ್ತೆ ಮಾರ್ಗವಾಗಿ ನಗರವನ್ನು ತಲುಪಿದ್ದು, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಧನ್ಯವಾದ ಅರ್ಪಿಸಿದಳು.
ಉಕ್ರೇನ್ನಲ್ಲಿ ಲೀಸಾ ಎಂಬೆಸರಿನ ಬೆಕ್ಕನ್ನು ಕುಟುಂಬವೊಂದರಿಂದ ದತ್ತು ಪಡೆದಿದ್ದೆ. ಹತ್ತು ತಿಂಗಳಿನಿಂದ ಈ ಬೆಕ್ಕು ನನ್ನೊಂದಿಗೆ ವಾಸವಾಗಿತ್ತು. ಅದನ್ನು ಬಿಟ್ಟು ಬರಲು ಮನಸಾಗದೆ ನನ್ನೊಂದಿಗೆ ಕರೆದುಕೊಂಡು ಬಂದಿದ್ದೇನೆ. ವಿಮಾನದಲ್ಲಿ ಬೆಕ್ಕನ್ನು ಕರೆದುಕೊಂಡು ಬರುವಾಗ ಯಾವುದೇ ಸಮಸ್ಯೆ ಆಗಿಲ್ಲ. ಉಕ್ರೇನ್ನಲ್ಲಿ ಮತ್ತೆ ಪರಿಸ್ಥಿತಿ ಸಹಜಸ್ಥಿತಿಗೆ ಬಂದರೆ ಮತ್ತೆ ಅಲ್ಲಿಗೆ ಹೋಗಿ ವಿದ್ಯಾಭ್ಯಾಸ ಪೂರ್ಣಗೊಳಿಸುವೆ ಎಂದು ಯುವತಿ ಹೇಳಿದರು.