ರಾಮಕುಂಜ/ದ.ಕ: ಕಡಬ ಪೊಲೀಸರು ಅಪಸ್ಮಾರ/ಮೂರ್ಚೆ ರೋಗದಿಂದ ತಪ್ಪಿ ಬಿದ್ದಿದ್ದ ವ್ಯಕ್ತಿಯ ಪಾಲಿಗೆ ಡಾಕ್ಟರ್ ಆಗಿ ಬಂದು ಜೀವ ಕಾಪಾಡಿದ ಘಟನೆ ರಾಮಕುಂಜದಲ್ಲಿ ನಡೆದಿದೆ.
ಕಡಬ ಠಾಣಾ ಎಸ್.ಐ ರುಕ್ಮ ನಾಯ್ಕ್ ಮತ್ತು ಸಿಬ್ಬಂದಿಗಳಾದ ಭವಿತ್ ರೈ, ಪೊಲೀಸ್ ವಾಹನ ಚಾಲಕ ಕನಕರಾಜ್ ಕರ್ತವ್ಯ ನಿಮಿತ್ತ ತೆರಳಿ ವಾಪಸ್ ಆಗುತ್ತಿದ್ದಾಗ ಆತೂರಿನಲ್ಲಿ ವ್ಯಕ್ತಿಯೊಬ್ಬ ಬಿಸಿಲಿನಲ್ಲಿ ಚರಂಡಿಗೆ ಬಿದ್ದದ್ದನ್ನು ಗಮನಿಸಿದ್ದಾರೆ. ಅಲ್ಲದೇ ಬಿದ್ದು ಗಾಯವಾಗಿರುವುದನ್ನು ಮನಗಂಡು ಆತನಿಗೆ ಪ್ರಥಮ ಚಿಕಿತ್ಸೆ ಮಾಡಿ ಉಪಚರಿಸಿದ್ದಾರೆ.
ಬಳಿಕ ಅಂಬ್ಯುಲೆನ್ಸ್ ಕರೆಸಿ ಪುತ್ತೂರಿನ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಇವರಿಗೆ ಅಲ್ಲಿನ ಸ್ಥಳೀಯರೂ ಸಹ ಸಹಕರಿಸಿದ್ದಾರೆ. ಸಮಾಜದಲ್ಲಿ ಪೊಲೀಸರ ಬಗ್ಗೆ ನಕಾರಾತ್ಮಕ ಚಿಂತನೆಗಳೇ ಹೆಚ್ಚು ಸುದ್ದಿಯಾಗುವ ಈ ಕಾಲದಲ್ಲಿ ಈ ಘಟನೆ ಬಗ್ಗೆ ಪೊಲೀಸರ ಮಾನವೀಯ ಮುಖವೂ ಅನಾವರಣಗೊಂಡಿದೆ. ಸದ್ಯ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.