ಮಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನನಗೂ ಸಾಕಷ್ಟು ಒತ್ತಡ ಹಾಕಲಾಗಿತ್ತು ಎಂದು ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜೇಗೌಡ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಧರ್ಮಸ್ಥಳದ ಶಾಂತಿವನ ಆಸ್ಪತ್ರೆಯಲ್ಲಿ ಪ್ರಕೃತಿ ಚಿಕಿತ್ಸೆಗೆ ಆಗಮಿಸಿರುವ ಅವರು ಈ ವಿಚಾರ ತಿಳಿಸಿದ್ದಾರೆ. ನಾನು ರಾಜಕಾರಣಕ್ಕಾಗಿ ಬಂದದ್ದು ಜನರ ಸೇವೆಗೋಸ್ಕರ, ಹಣಕ್ಕೋಸ್ಕರ ಅಲ್ಲ. ಒಂದು ಪಕ್ಷದಲ್ಲಿ ಗೆದ್ದ ಬಳಿಕ ಆ ಪಕ್ಷದ ಋಣ ತೀರಿಸಬೇಕು. ಚುನಾವಣಾ ಸಂದರ್ಭದಲ್ಲಿ ಸ್ಪರ್ಧೆಗೆ ಬಹಳಷ್ಟು ಆಕಾಂಕ್ಷಿಗಳು ಇರುತ್ತಾರೆ. ಅಂತ ಸಂದರ್ಭದಲ್ಲಿ ನಮ್ಮನ್ನು ಗುರುತಿಸಿ ಟಿಕೆಟ್ ನಿಡಿದ್ದಾರೆ. ಕಾಂಗ್ರೆಸ್ ಮುಖಂಡರುಗಳು, ಮುಖ್ಯಮಂತ್ರಿ ಅವರು ಬಹಳಷ್ಟು ಅಭಿವೃದ್ಧಿ ಕೆಲಸಕ್ಕೆ ಸಹಕರಿಸಿದ್ದಾರೆ ಎಂದರು.
ಶೃಂಗೇರಿಯಲ್ಲಿ ಕಳೆದ ವರ್ಷ ಸಂಭವಿಸಿದ್ದ ಅತೀ ವೃಷ್ಠಿ ವೇಳೆ ನಮ್ಮ ನಿರೀಕ್ಷೆಗೂ ಮೀರಿದ ಪರಿಹಾರವನ್ನು ಸರ್ಕಾರ ನೀಡಿದೆ. ಅಂತದರಲ್ಲಿ ಈ ಶಾಸಕರುಗಳು ಏಕಾಏಕಿ ಹೋಗಿ ಸರ್ಕಾರವನ್ನು ಅಭದ್ರಗೊಳಿಸುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸರಿಯಲ್ಲ. ನನಗೂ ಸಾಕಷ್ಟು ಒತ್ತಡ ಬಂದಿದೆ. ವೈಯಕ್ತಿಕವಾಗಿ ಯಾರ ಹೆಸರನ್ನು ಹೇಳುವುದಿಲ್ಲ. ತಡೆಯಲಾಗದಷ್ಟು ಒತ್ತಡ, ಆಮಿಷಗಳು ಬಂದಿವೆ. ಆದರೂ ಪಕ್ಷದ ತತ್ವ, ಸಿದ್ಧಾಂತ ನಂಬಿ ಪಕ್ಷದಲ್ಲಿದ್ದೇನೆ ಎಂದು ರಾಜೇಗೌಡ ಹೇಳಿದ್ರು.