ಮಂಗಳೂರು: ಕಂಬಳ ಓಟದಲ್ಲಿ ದಾಖಲೆ ಮಾಡಿದ ಶ್ರೀನಿವಾಸ ಗೌಡ, ಕಂಬಳ ಸಮಿತಿಯ ಸ್ಥಾಪಕ ಕಾರ್ಯದರ್ಶಿ ಗುಣಪಾಲ ಕಡಂಬ ಮತ್ತು ಲೇಸರ್ ಬೀಮ್ ತಂತ್ರಜ್ಞಾನ ಮಾಡಿದ ಸ್ಕೈವೀವ್ ರತ್ನಾಕರ ಅವರ ಮೇಲೆ ಕಂಬಳ ಸಮಿತಿಯ ಸದಸ್ಯ, ಕಂಬಳ ಕೋಣಗಳ ಯಜಮಾನ ಲೋಕೇಶ್ ಶೆಟ್ಟಿ ಅವರು ಮಾಡಿರುವ ಆಪಾದನೆಗಳಿಗೆ ಇಂದು ಗುಣಪಾಲ ಕಡಂಬ ಸ್ಪಷ್ಟನೆ ನೀಡಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಬಳಕ್ಕೆ ಕಳಂಕ ತರಲು, ಶ್ರೀನಿವಾಸ ಗೌಡರ ತೇಜೋವಧೆ ಮಾಡಲು ಹಾಗೂ ಕಂಬಳ ಅಕಾಡೆಮಿಯ ಚಟುವಟಿಕೆಗಳನ್ನು ಸಹಿಸದೇ ಸುಳ್ಳು ಆರೋಪ ಮಾಡಿ ಪೊಲೀಸ್ ದೂರು ದಾಖಲಿಸಿದ್ದಾರೆ.
2020ರ ಐಕಳ ಕಂಬಳೋತ್ಸವದಲ್ಲಿ ಶ್ರೀನಿವಾಸ ಗೌಡ 9.55 ಸೆಕೆಂಡ್ನಲ್ಲಿ ಕೋಣಗಳನ್ನು ಓಡಿಸಿ ದಾಖಲೆ ಬರೆದಿದ್ದರು. ಆದರೆ, ಇದನ್ನು ನಾವು ಯಾರೂ ಮಾಧ್ಯಮಕ್ಕೆ ಉಸೇನ್ ಬೋಲ್ಟ್ ಗೆ ಹೋಲಿಸಿ ಮಾಹಿತಿ ನೀಡಿಲ್ಲ. ಈ ಬಗ್ಗೆ ಹೇಳಿಕೆ ನೀಡಿದವರು ನಮ್ಮ ಮೇಲೆ ದೂರು ನೀಡಿದ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿ ಮತ್ತು ವಿಜಯ ಕುಮಾರ್ ಕಂಗಿನಮನೆಯವರು.
ಆದರೆ, ಇದೀಗ ಕೇವಲ ಕಂಬಳ ಅಕಾಡೆಮಿಗೆ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ ಈ ರೀತಿಯ ಸುಳ್ಳು ಆಪಾದನೆ ಮಾಡುತ್ತಿದ್ದಾರೆ. ಶ್ರೀನಿವಾಸ ಗೌಡ ಅವರು ಕಂಬಳ ಸಂರಕ್ಷಣೆ, ನಿರ್ವಹಣೆ ಹಾಗೂ ತರಬೇತಿ ಅಕಾಡೆಮಿಯಿಂದ ತರಬೇತಿ ಪಡೆದಿದ್ದು, ಅವರಿಗೆ ಖ್ಯಾತಿ ಬಂದರೆ ಅಕಾಡೆಮಿಯ ಹೆಸರು ಬರುತ್ತದೆ. ಸಾಧನೆ ವಿಚಾರ ಬರುವಾಗ ಗುಣಪಾಲ ಕಡಂಬರ ಹೆಸರು ಬರುತ್ತದೆ ಎಂಬ ಆಕ್ರೋಶದಿಂದ ಸುಮ್ಮನೆ ಆರೋಪ ಮಾಡಲಾಗುತ್ತಿದೆ.
ಇದನ್ನೂ ಓದಿ: ಉಸೇನ್ ಬೋಲ್ಟ್ ದಾಖಲೆ ಮುರಿದ ಕಂಬಳ ವೀರ ಶ್ರೀನಿವಾಸ ಗೌಡ ವಿರುದ್ಧ ದೂರು
ದುರಾದೃಷ್ಟವಶಾತ್ ಕೆಲ ಮಾಧ್ಯಮಗಳಲ್ಲಿ ನಮ್ಮ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ಸುದ್ದಿ ಬಿತ್ತರವಾಗಿದೆ. ಆದರೆ, ದೂರು ಮಾತ್ರ ದಾಖಲಾಗಿದೆಯೇ ವಿನಃ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ. ನಾವೇನು ರಾಬರಿ, ಪೋರ್ಜರಿ ಮಾಡಿಲ್ಲ. ನಾವು ಯಾರಿಗೂ ಮೋಸವನ್ನು ಮಾಡಿಲ್ಲ ಎಂದು ಹೇಳಿದರು.