ಮಂಗಳೂರು: ಕೇಂದ್ರ ಸರ್ಕಾರದ ನಿರ್ದೇಶನದಂತೆ ಏ. 20ರವರೆಗೆ ಕಟ್ಟುನಿಟ್ಟಿನ ಕ್ರಮಗಳು ಜಾರಿಯಲ್ಲಿದ್ದು, ಬಳಿಕ ಕೃಷಿ, ಮೀನುಗಾರಿಕೆ, ತೋಟಗಾರಿಕೆ ಹಾಗೂ ಕಟ್ಟಡ ನಿರ್ಮಾಣ ಮುಂತಾದವುಗಳಿಗೆ ವಿನಾಯಿತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಕೋವಿಡ್-19 ಸೋಂಕು ಹರಡದಂತೆ ದ.ಕ ಜಿಲ್ಲೆಯ ಎಲ್ಲಾ ಉನ್ನತ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ಕೋವಿಡ್-19 ಸೋಂಕು ಹರಡದಂತೆ ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ. ನಮ್ಮ ಒಟ್ಟು ಕಾರ್ಯತಂತ್ರದ ಮೂಲಕ ನಮ್ಮ ಜಿಲ್ಲೆ ರೆಡ್ ಝೋನ್ನಿಂದ ಹೊರ ಬರಲಿದೆ ಎಂದರು.
ಇಂದು ಉಪ್ಪಿನಂಗಡಿಯ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಗೊಂಡಿದೆ. ಏ. 2ರಂದು ಗಂಟಲು ದ್ರವ ಪರಿಶೀಲನೆ ಮಾಡಿದಾಗ ನೆಗೆಟಿವ್ ಬಂದಿದ್ದು, ಮತ್ತೆ ಏ. 13ರಂದು ಗಂಟಲು ದ್ರವ ಕಳಿಸಲಾಗಿತ್ತು. ಇಂದು ಆತನಲ್ಲಿ ಸೋಂಕು ದೃಢಗೊಂಡಿದೆ. ತಕ್ಷಣ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ದ.ಕ ಜಿಲ್ಲೆಯಲ್ಲಿ 100 ನಾಡದೋಣಿಗಳು ಕಾರ್ಯಶೀಲವಾಗಿದ್ದು, ದಿನಕ್ಕೆ ಸುಮಾರು 5 ಸಾವಿರ ಕೆಜಿಯಷ್ಟು ಮೀನು ಲಭ್ಯವಾಗುತ್ತಿದೆ. ಈ ದೋಣಿಗಳು ದಕ್ಕೆಗೆ ಬರುತ್ತಿಲ್ಲ. ಅದಕ್ಕಾಗಿ 11 ಸ್ಥಳಗಳನ್ನು ನಿಯೋಜನೆ ಮಾಡಲಾಗಿದೆ. ಅಲ್ಲಿ ಮಾರಾಟಗಾರರಿಗೆ ಮಾತ್ರ ಮೀನು ನೀಡಲಾಗುವುದು. ಹಾಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾಗುತ್ತದೆ ಎಂದು ತಿಳಿಸಿದರು.