ಮಂಗಳೂರು: ವಾಯು ವಿಹಾರಕ್ಕೋ, ಸುಂದರ ಪ್ರಕೃತಿಯ ಆಸ್ವಾದನೆಗೋ ಎಂಬಂತೆ ಕೆಲವರು ಉದ್ಯಾನವನಗಳಿಗೆ ಹೋಗುತ್ತಾರೆ. ಅದಕ್ಕಾಗಿ ಸಾವಿರಾರು ರೂ. ಖರ್ಚು ಮಾಡಿ ಪ್ರವಾಸ ಹೋಗುವವರೂ ಉಂಟು. ಆದರೆ, ಸಾಕಷ್ಟು ವರ್ಷಗಳ ಪ್ರಯತ್ನದ ಫಲವಾಗಿ ಮನೆಯಂಗಳದಲ್ಲಿಯೇ ಉದ್ಯಾನವನ ಮಾಡಿರುವ ಓರ್ವ ವ್ಯಕ್ತಿ ಎಲ್ಲರ ಆಕರ್ಷಣೆಗೆ ಕಾರಣವಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಕೊಡಿಯಾಲ ಗ್ರಾಮದ ಕುರಿಯಾಜೆಯ ತಿರುಮಲೇಶ್ವರ ಭಟ್ ಅವರು ಈ ಉದ್ಯಾನವನದ ರೂವಾರಿ. ವಿವಿಧ ಜಾತಿಯ ಆರ್ಕೀಡ್ ಸಸ್ಯಗಳು, ಅಂಥೋರಿಯಂ ಗಿಡಗಳು, ಕ್ಯಾಕ್ಟಸ್, ಕೇಪಳ ಹೀಗೆ... ಹಲವಾರು ಅಲಂಕಾರಿಕ ಗಿಡಗಳ ಮೂಲಕ ಸುಂದರ ಉದ್ಯಾನವನವೊಂದನ್ನು ಮನೆಯಂಗಳದಲ್ಲಿಯೇ ಸೃಷ್ಟಿಸಿದ್ದಾರೆ.
![Eco lover who created a small garden in front of the house](https://etvbharatimages.akamaized.net/etvbharat/prod-images/kn-mng-05-home-gardening-script-ka10015_14072021214015_1407f_1626279015_437.jpg)
ತಿರುಮಲೇಶ್ವರ ಭಟ್ ಅವರು ಪ್ರವಾಸಿಪ್ರಿಯರೂ ಆಗಿದ್ದು, ಕೇರಳ, ಉತ್ತರ ಭಾರತ, ಮಲೇಷಿಯಾ, ಥಾಯ್ಲೆಂಡ್, ನೇಪಾಳ ಹೀಗೆ... ಹತ್ತಾರು ಪ್ರದೇಶಕ್ಕೆ ಪ್ರವಾಸ ಹೋಗುವುದು ಅವರ ಹವ್ಯಾಸ. ಹಾಗೆ ಪ್ರವಾಸಕ್ಕೆ ತೆರಳಿದಾಗಲೆಲ್ಲ ಅಲ್ಲಿ ಕಂಡ ಸುಂದರ ಗಿಡಗಳನ್ನು ತಂದು ಪೋಷಿಸುತ್ತಾರೆ. ಆಗಾಗ್ಗೆ ತಂದ ದೇಶ-ವಿದೇಶಗಳ ಅಪರೂಪದ ಗಿಡ, ಮರಗಳು ಮನೆಯಂಗಳದಲ್ಲಿ ಬೆಳೆಯಲು ಸಾಧ್ಯವಾಯಿತು. ಅಷ್ಟೇ ಅಲ್ಲದೆ ತಿರುಮಲೇಶ್ ಭಟ್ ಅವರ ಗಾರ್ಡನಿಂಗ್ನಲ್ಲಿಯೂ ಸಿದ್ಧಹಸ್ತರಾಗಿದ್ದರಿಂದ ಅವರ ಮನೆಯಂಗಳದಲ್ಲಿ ಬರೀ ತೋಟ ಅಷ್ಟೇ ಅಲ್ಲ, ಉದ್ಯಾನವನವೇ ಸೃಷ್ಟಿಯಾಗಿದೆ.
ಇಂದು ಇವರ ಮನೆಯಂಗಳವನ್ನು ನೋಡಿದವರು ಮತ್ತೊಂದು ಬಾರಿ ತಿರುಗಿ ನೋಡುವಂತಹ ತಾಣವಾಗಿದೆ. ಹಾಗಾಗಿಯೇ ಬಹಳಷ್ಟು ಜನರು ಇವರ ಮನೆಯಂಗಳದ ಸೊಬಗಿಗೆ ಮನಸೋತು ಮತ್ತೆ ಮತ್ತೆ ಬರುತ್ತಿರುತ್ತಾರಂತೆ. ಅಲ್ಲದೆ ಸೆಲ್ಫಿ ತೆಗೆಯಲು, ಸುಂದರ ಫೋಟೊಗಳಿಗಾಗಿಯೂ ಒಂದಷ್ಟು ಮಂದಿ ಬರುವುದಿದೆಯಂತೆ.
![Eco lover who created a small garden in front of the house](https://etvbharatimages.akamaized.net/etvbharat/prod-images/kn-mng-05-home-gardening-script-ka10015_14072021214015_1407f_1626279015_810.jpg)
ತಿರುಮಲೇಶ್ವರ ಅವರು ಉದ್ಯಾನವನನ್ನು ಯೋಜನಾಬದ್ಧವಾಗಿ ರೂಪಿಸಿದವರಲ್ಲ. ತಮ್ಮ ಖುಷಿಗೋಸ್ಕರ ಗಿಡಗಳನ್ನು ನೆಡುತ್ತಾ ಹೋದರು. ಅದುವೇ ಈಗ ಸುಂದರ ಉದ್ಯಾನವನವಾಗಿ ಮನೆಯಂಗಳದ ಸೊಬಗು ಹೆಚ್ಚಿಸಿದ್ದು, ಆಕರ್ಷಣೆಯ ಕೇಂದ್ರವಾಗಿದೆ. ಇದಕ್ಕಾಗಿ ಭಟ್ ಅವರು ಕಳೆದ 20 ವರ್ಷಗಳಿಂದ ಅವಿರತವಾಗಿ ಶ್ರಮಿಸಿದ್ದಾರೆ. ಸ್ವತಃ ತಾವೇ ಗಿಡಗಳಿಗೆ ರೂಪು ನೀಡಿದ್ದಾರೆ. ಗಿಡಗಳ ಕಟಿಂಗ್ಗಾಗಿ ಗಾರ್ಡನ್ ತಜ್ಞರನ್ನು ಇವರು ಅವಲಂಬಿಸಿಲ್ಲ. ತಮಗೆ ಯಾವ ರೂಪ ಬೇಕೊ ಹಾಗೇ ಶೇಪ್ ನೀಡುತ್ತಾ ಹೋಗಿದ್ದಾರೆ. ಈಗ ಅದರಲ್ಲೇ ಖುಷಿ ಪಟ್ಟರು. ಗಾರ್ಡನ್ ಕೆಲಸದಲ್ಲಿ ಇವರ ಜೊತೆ ಮನೆಯವರೆಲ್ಲರೂ ಕೈಜೊಡಿಸಿದ್ದಾರೆ.
ಇವರ ತೋಟದಲ್ಲಿಯೂ ದೇಶ ವಿದೇಶಗಳ ರಾಂಬುಟಾನ್, ಮ್ಯಾಂಗೊಸ್ಟಿನ್, ಡುರಿಯಾನೋ, ಲಾಂಗಾನ್ ಹೀಗೆ... ಸುಮಾರು 200ಕ್ಕೂ ಅಧಿಕ ಅಪರೂಪದ ಹಣ್ಣಿನ ಮರಗಿಡಗಳನ್ನು ಬೆಳೆಸಿದ್ದಾರೆ. ಯಾವುದೇ ವಾಣಿಜ್ಯದ ಉದ್ದೇಶದಿಂದ ಬೆಳೆಸದೇ ಸ್ವಂತ ಬಳಕೆಗಾಗಿ ಬೆಳೆಸಲಾಗಿದೆ. ಸುಮಾರು 20 ಬಗೆಯ ಹಲಸು, ಮಾವಿನ ಮರಗಳು ಇವರಲ್ಲಿವೆ. ಉಳಿದಂತೆ ಅಡಿಕೆ, ತೆಂಗು, ಬಾಳೆ, ಕಾಳುಮೆಣಸು, ರಬ್ಬರ್ ಬೆಳೆಯಲಾಗಿದೆ. ದೇಸಿ ಗೋಸಾಕಣೆ, ತೋಟದಲ್ಲಿ ನೀರಿಂಗಿಸುವಿಕೆ ಹೀಗೆ... 8 ಎಕರೆ ತೋಟದಲ್ಲಿ ಸುಸಜ್ಜಿತ ಮಾದರಿ ಕೃಷಿ ಇವರದ್ದು, ತಿರುಮಲೇಶ್ವರ ಭಟ್ ಅವರ ಕೃಷಿ ಸಾಧನೆಯನ್ನು ಗುರುತಿಸಿ ಕೃಷಿ ರತ್ನ, ತಾಲೂಕು ಕೃಷಿ ಪಂಡಿತ ಪ್ರಶಸ್ತಿ ಸಹ ಲಭಿಸಿದೆ.