ಬೆಳ್ತಂಗಡಿ (ದಕ್ಷಿಣ ಕನ್ನಡ) : ಮೀಸಲು ಅರಣ್ಯದೊಳಗೆ ಪರವಾನಗಿ ಪಡೆದ ಬಂದೂಕಿನಿಂದ ಕಡವೆ ಬೇಟೆಯಾಡಿ ಸಾಗಿಸುವ ವೇಳೆ ಉಪ್ಪಿನಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಒಬ್ಬ ಆರೋಪಿ ಪರಾರಿಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ದಡಂತಮಲೆ ಮೀಸಲು ಅರಣ್ಯದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಸಂಕೇಶ ನಿವಾಸಿ ಜಾರಪ್ಪ ಗೌಡರ ಮಗ ಎಸ್.ಜೆ ಸಂದೇಶ್(37), ಮಣಿಯೆರು ನಿವಾಸಿ ಸುಬ್ಬಣ್ಣ ಅವರ ಮಗ ಪುನೀತ್ (22), ಸಂಕೇಶ ನಿವಾಸಿ ವಾಮನ ಗೌಡರ ಮಗ ಕೋಟ್ಯಾಪ್ಪ ಗೌಡ(59) ಬಂಧಿತ ಆರೋಪಿ. ಮತ್ತೊಬ್ಬ ಪರಾರಿಯಾಗಿರುವ ಆರೋಪಿ ಸಂಕೇಶ ನಿವಾಸಿ ಜಾರಪ್ಪ ಗೌಡರ ಮಗ ಲೋಕೇಶ್ ನನ್ನು ಬಂಧಿಸಲು ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಮೈಸೂರು: ಕಾಡುಪ್ರಾಣಿಗಳ ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವು
ಆರೋಪಿಗಳಿಂದ ಪರವಾನಗಿ ಪಡೆದಿದ್ದ ಬಂದೂಕು, ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಸುಮಾರು ಎರಡು ಕ್ವಿಂಟಲ್ ತೂಕ ಇರುವ ಕಡವೆ ಗುಂಡೆಟಿಗೆ ಸಾವನ್ನಪ್ಪಿದೆ. ಕಡವೆ ಮೃತದೇಹವನ್ನು ಬೆಳ್ತಂಗಡಿ ಪಶು ಇಲಾಖೆಯ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ಸುಬ್ರಮಣ್ಯದ ಮಣ್ಣಗುಂಡಿ ಅರಣ್ಯ ಇಲಾಖೆಯ ಮರದ ಡೀಪೋದ ಜಾಗದಲ್ಲಿ ದಫನ ನಡೆಸಲಾಗಿದೆ. ಉಪ್ಪಿನಂಗಡಿ ಅರಣ್ಯ ಇಲಾಖೆಯಲ್ಲಿ ವನ್ಯಜೀವಿ ಅಡಿ ಮೂವರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇದನ್ನೂ ಓದಿ : ನಾಗರಹೊಳೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಜಿಂಕೆ ಬೇಟೆ: ಮಾಂಸ ಜೋಳದ ಹೊಲದಲ್ಲಿ ಪತ್ತೆ.. ಇಬ್ಬರ ಬಂಧನ
ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯ ಆರ್ಎಫ್ಒ ಜಯಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಪಟ್ರಮೆ ಶಾಖೆಯ ಉಪಅರಣ್ಯಾಧಿಕಾರಿ ಲೋಕೇಶ್.ಎನ್ ಮತ್ತು ಕೊಕ್ಕಡ ಶಾಖೆಯ ಉಪಅರಣ್ಯಾಧಿಕಾರಿ ಅಶೋಕ್ ನೇತೃತ್ವದ ತಂಡದ ಸಿಬ್ಬಂದಿಗಳಾದ ಅರಣ್ಯ ಗಸ್ತು ವನಪಾಲಕರಾದ ವಿನಯ ಚಂದ್ರ , ಪ್ರಶಾಂತ್ , ರಾಜೇಶ್ ,ಸುನಿಲ್ , ಅರಣ್ಯ ವೀಕ್ಷಕ ಸಂತೋಷ್ , ವಾಹನ ಚಾಲಕ ಕಿಶೋರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಚಾಮರಾಜನಗರದಲ್ಲಿ ಜಿಂಕೆ ಕಡವೆ ಮಾಂಸ ಜೊತೆ ಆರೋಪಿಗಳು ಸೆರೆ : ರಾಮಾಪುರ ವನ್ಯ ಜೀವಿ ವಲಯದಲ್ಲಿ ಕಡವೆ ಬೇಟೆಯಾಡಿ ಅದರ ಮಾಂಸವನ್ನು ಪಾಲು ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿತ್ತು. ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಜೊತೆಗೆ ಮತ್ತೊಂದು ಪ್ರಕರಣದಲ್ಲಿ ಹನೂರು ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ ತಂತಿಯಲ್ಲಿ ನೇತು ಹಾಕಿದ್ದ 3 ಕೆಜಿಯಷ್ಟು ಜಿಂಕೆ ಮಾಂಸವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ 2 ಪ್ರಕರಣ ಜೂನ್ ತಿಂಗಳಿನಲ್ಲಿ ನಡೆದಿತ್ತು.
ಇದನ್ನೂ ಓದಿ : ಬ್ಯಾಗ್ನಲ್ಲಿ ಹೆಬ್ಬಾವು, ಕಾಂಗರೂ ಸೇರಿ ಕಾಡು ಪ್ರಾಣಿಗಳ ಕಳ್ಳಸಾಗಣೆ: ಕಸ್ಟಮ್ಸ್ನಿಂದ 234 ವನ್ಯಜೀವಿಗಳ ರಕ್ಷಣೆ