ಸುಳ್ಯ: ನಿರ್ಮಿತಿ ಕೇಂದ್ರದವರು ತಾಲೂಕು ಆಸ್ಪತ್ರೆಗೆ ನೀಡಿರುವ ಕೊವಿಡ್-19 ಸ್ಯಾಂಪಲ್ ಸಂಗ್ರಹಣಾ ಘಟಕದ ಉದ್ಘಾಟನೆಯನ್ನು ಶಾಸಕ ಎಸ್.ಅಂಗಾರ ನೆರವೇರಿಸಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತದ ಆದೇಶದ ಮೇರೆಗೆ ಪ್ರತಿ ತಾಲೂಕಿಗೆ ಒಂದು ಗಂಟಲು ದ್ರವ ಪರೀಕ್ಷಾ ಘಟಕವನ್ನು ನಿರ್ಮಿತಿ ಕೇಂದ್ರ ನೀಡುತ್ತಿದೆ. ಅದರಂತೆ, ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಯಾಂಪಲ್ ಸಂಗ್ರಹಣಾ ಘಟಕ ಆರಂಭಗೊಂಡಿದೆ. ಸಾಮಾನ್ಯವಾಗಿ ಕೊರೊನಾ ಪರೀಕ್ಷೆಗಾಗಿ ಗಂಟಲಿನ ದ್ರವವನ್ನು ತೆಗೆಯುವವರು ವೈಯುಕ್ತಿಕ ಸುರಕ್ಷಾ ಸಲಕರಣೆ (ಪಿಪಿಇ)ಗಳನ್ನು ಹಾಕಿಕೊಂಡು ತೆಗೆಯಬೇಕಾಗುತ್ತದೆ. ಪಿಪಿಇ ಕಿಟ್ಗೆ ತಗಲುವ ಖರ್ಚು ಹೆಚ್ಚು ಮತ್ತು ಸುರಕ್ಷತೆಯೂ ಕಡಿಮೆ. ಅದರೆ, ಈ ನೂತನ ಘಟಕದಲ್ಲಿ ಗಂಟಲು ದ್ರವ ತೆಗೆಯುವವರು ಒಳಗಿನಿಂದಲೇ ಹೊರಗೆ ನಿಂತಿರುವ ವ್ಯಕ್ತಿಯ ಸ್ಯಾಂಪಲ್ ಸುರಕ್ಷಿತವಾಗಿ ತೆಗೆಯಬಹುದು. ಇದರಿಂದ ವೈದ್ಯರು ಹಾಗೂ ರೋಗಿಯ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸುಲಭವಾಗಲಿದೆ ಎಂದು ಸುಳ್ಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಭಾನುಮತಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯ ರಾಧಾಕೃಷ್ಣ ಬೊಳ್ಳೂರು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯ, ವೈದ್ಯಾಧಿಕಾರಿಗಳಾದ ಡಾ.ಭಾನುಮತಿ, ಡಾ.ಹರೀಶ್, ಹಾಗೂ ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್ ಮೆದು ಉಪಸ್ಥಿತರಿದ್ದರು.