ಪುತ್ತೂರು: ಪುತ್ತೂರು ಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿದ್ದ ನೆಕ್ಕಿಲಾಡಿ ಪಂಪ್ ಹೌಸ್ನಲ್ಲಿ ವಿದ್ಯುತ್ ಸಮಸ್ಯೆ ಆಗಿರುವ ಹಿನ್ನೆಲೆಯಲ್ಲಿ ಪುತ್ತೂರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಈ ಕುರಿತು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ನಗರಸಭೆ ಸದಸ್ಯರಿಂದ ಪುತ್ತೂರು ಮೆಸ್ಕಾಂ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಪುತ್ತೂರು ನಗರಸಭೆ ಸದಸ್ಯರು ಪೌರಾಯುಕ್ತರಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಪೌರಾಯುಕ್ತೆ ರೂಪಾ ಶೆಟ್ಟಿಯವರಿಗೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ತಿಳಿಸಲಾಗಿದ್ದು. ನಗರಸಭೆ ವ್ಯಾಪ್ತಿಗೆ ನೆಕ್ಕಿಲಾಡಿಯಿಂದ ಬರುತ್ತಿರುವ ಕುಡಿಯುವ ನೀರಿನ ಘಟಕದ ಮೂಲ ಸ್ಥಾವರಕ್ಕೆ ನಿರಂತರ ವಿದ್ಯುತ್ ನೀಡುವ ಸೌಲಭ್ಯವಿದ್ದರೂ, ಪ್ರತಿದಿನ ಆಗಾಗ ವಿದ್ಯುತ್ ತೆಗೆಯುವುದರಿಂದ ಪುತ್ತೂರು ಪಟ್ಟಣದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸದಸ್ಯರಾದ ಜೀವಂದರ್ ಜೈನ್, ಭಾಮಿ ಅಶೋಕ್ ಶೆಣೈ, ಪಿ.ಜಿ.ಜಗನ್ನಿವಾಸ ರಾವ್, ಶಿವರಾಮ ಸಪಲ್ಯ ಸೇರಿದಂತೆ ಇತರ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.