ಮಂಗಳೂರು: ನಗರದ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ನಡೆದ ಎಸ್ಡಿಪಿಐ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಪೊಲೀಸರನ್ನು ನಿಂದಿಸಿ, ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರು ಎಸ್ಡಿಪಿಐ ಕಾರ್ಯಕರ್ತರು ಸೇರಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮಂಗಳೂರಿನ ಇನೋಳಿಯ ನೌಷಾದ್ (28), ಹೈದರಾಳಿ (27) ಮತ್ತು ಅವರಿಗೆ ಆಶ್ರಯ ನೀಡಿದ ಪಾಂಡೇಶ್ವರದ ಮೊಹಮ್ಮದ್ ಸಯ್ಯದ್ ಅಫ್ರೀದ್ (23), ಬಶೀರ್ (40), ಜುಬೇರ್ (32), ಜಲೀಲ್ (25) ಎಂಬುವರನ್ನು ಬಂಧಿಸಲಾಗಿದೆ. ಇನ್ನೂ 9 ಮಂದಿಯನ್ನು ಬಂಧಿಸಲು ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಆರೋಪಿಗಳಾದ ನೌಷಾದ್ ಮತ್ತು ಹೈದರಾಳಿ ಎಸ್ಡಿಪಿಐ ಸಮಾವೇಶಕ್ಕೆ ತೆರಳುತ್ತಿದ್ದ ವೇಳೆ ಪೊಲೀಸರಿಗೆ ನಿಂದಿಸಿ ಮಾಡಿದ ವಿಡಿಯೋ ವೈರಲ್ ಆಗಿತ್ತು. ಇವರು ಮಾತ್ರವಲ್ಲದೆ ಮತ್ತೊಂದು ಬೈಕ್ನಲ್ಲಿದ್ದ ಇಬ್ಬರು ಮತ್ತು ಎರಡು ಕಾರಿನಲ್ಲಿದ್ದ 7 ಮಂದಿ ಆರೋಪಿಗಳು ಬಂದೋಬಸ್ತ್ ನಡೆಸುತ್ತಿದ್ದ ಪೊಲೀಸರ ಮೇಲೆ ತಮ್ಮ ವಾಹನವನ್ನು ಹರಿಸಲು ಯತ್ನಿಸಿದ್ದರು ಎನ್ನಲಾಗ್ತಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಫೇಮಸ್ ಆಗಲು ಕೃತ್ಯ: ಬಂಧಿತ ಆರೋಪಿ ನೌಷಾದ್ ಬೆಂಗಳೂರಿನಲ್ಲಿ ಮತ್ತು ಹೈದರಾಳಿ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕೇರಳದಲ್ಲಿ ನಡೆದ ಎಸ್ಡಿಪಿಐ ಸಮಾವೇಶದಲ್ಲಿ ಬಾಲಕನೊಬ್ಬ ಕೂಗಿದ ಪ್ರಚೋದನಕಾರಿ ಘೋಷಣೆಯಿಂದ ಫೇಮಸ್ ಆದಂತೆ, ಇವರು ಕೂಡ ಅದೇ ರೀತಿಯ ಕುಖ್ಯಾತಿ ಪಡೆಯಬೇಕು. ತಮ್ಮನ್ನು ಗುರುತಿಸುವಂತಾಗಬೇಕು ಎಂದು ಈ ಕೃತ್ಯ ಮಾಡಲು ಚಿಂತಿಸಿದ್ದರು. ತಾವು ಮಾಡುವ ಕೃತ್ಯ ಮತ್ತು ಘೋಷಣೆಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಫೇಮಸ್ ಆಗುವುದು ಇವರ ಪ್ಲಾನ್ ಆಗಿತ್ತು ಎಂದು ಕಮಿಷನರ್ ತಿಳಿಸಿದರು.
ಮಡಿವಾಳ ಪೊಲೀಸರಿಂದ ಮೂವರ ಬಂಧನ: ಆರೋಪಿ ನೌಷಾದ್ನನ್ನು ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಬಂಧಿಸಲು ಹೋದಾಗ ಆತನ ರೂಂನಲ್ಲಿದ್ದ ಇತರ ಮೂವರು ತಪ್ಪಿಸಿಕೊಳ್ಳಲು ಸಹಕರಿಸಿದ್ದು ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗೂ ಗಾಯವಾಗಿತ್ತು. ಈ ಬಗ್ಗೆ ಬಂಧಿಸಲು ಹೋದ ಕಂಕನಾಡಿ ನಗರ ಠಾಣಾ ಪೊಲೀಸರು ಮಡಿವಾಳ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಮಡಿವಾಳ ಪೊಲೀಸರು ದ.ಕ ಜಿಲ್ಲೆಯ ವಿಟ್ಲದ ಮೊಹಮ್ಮದ್ ಯಾಸೀನ್, ಅಫ್ರೀದ್ ಸಾಗ್, ಮೊಹಮ್ಮದ್ ತುಫೇಲ್ ಎಂಬ ಮೂವರನ್ನು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ವಿವರಿಸಿದರು.
ಇದನ್ನೂ ಓದಿ: SDPI ಸಮಾವೇಶಕ್ಕೆ ತೆರಳುತ್ತಿದ್ದ ಯುವಕನಿಂದ ಪೊಲೀಸರ ಅವಹೇಳನ ಆರೋಪ.. ವಿಡಿಯೋ ವೈರಲ್
ಆಶ್ರಯ ಕೊಟ್ಟವರ ಮೇಲೂ ಪ್ರಕರಣ: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಪೊಲೀಸರನ್ನು ನಿಂದಿಸಿದ ವಿಡಿಯೋ ವೈರಲ್ ಆಗಿ ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರೂ ಆರೋಪಿಗಳಿಗೆ ಬಚ್ಚಿಟ್ಟುಕೊಳ್ಳಲು ಸಲಹೆ ನೀಡಿದವರ ಮತ್ತು ಸಹಕರಿಸಿದವರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಬೇರೆ ಬೇರೆ ರೀತಿಯಲ್ಲಿ ಆಶ್ರಯ ನೀಡಿದ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಇನ್ನೂ ಹಲವರ ಬಂಧನಕ್ಕೆ ಶೋಧ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ. ಒಂದೆರಡು ದಿನದಲ್ಲಿ ಹಣ ಹೊಂದಿಸಿಕೊಂಡು, ನಿರೀಕ್ಷಣಾ ಜಾಮೀನು ಸಿಗುವವರೆಗೆ ಮೈಸೂರಿನ ಹೊರಭಾಗ ಅಥವಾ ಕೇರಳದಲ್ಲಿ ಬಚ್ಚಿಟ್ಟುಕೊಳ್ಳಲು ತಯಾರಿ ನಡೆಸಿದ್ದರಂತೆ.