ಮಂಗಳೂರು: ಪಣಂಬೂರು ಸಮೀಪದ ತಣ್ಣೀರುಬಾವಿ ಕಡಲ ತೀರದಲ್ಲಿ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಒಬ್ಬ ನಾಪತ್ತೆಯಾಗಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಳೆದ ರಾತ್ರಿ ನಡೆದಿದೆ.
ಎಂಆರ್ಪಿಎಲ್ ಪೈಪ್ಲೈನ್ ಕಾಮಗಾರಿಯು ತಣ್ಣೀರುಬಾವಿ ಬಳಿಯ ಕಡಲ ತೀರದಲ್ಲಿ ನಡೆಯುತ್ತಿದ್ದು, ಉತ್ತರ ಭಾರತ ಮೂಲದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು.
ನಿನ್ನೆ ರಾತ್ರಿ ಸುಮಾರು 8:30ರ ವೇಳೆಗೆ ಬೀಸಿದ ಬಿರುಗಾಳಿಗೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿದ್ದ ದೋಣಿ ಮಗುಚಿದೆ. ಈ ದೋಣಿಯಲ್ಲಿ ಐವರು ಕಾರ್ಮಿಕರಿದ್ದರು. ಆ ಪೈಕಿ ಓರ್ವ ನೀರಲ್ಲಿ ನಾಪತ್ತೆಯಾದರೆ, ಮೂವರನ್ನು ಇತರರು ರಕ್ಷಿಸಿದ್ದಾರೆ. ಅಲ್ಲದೇ ಓರ್ವನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪಣಂಬೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.