ಪುತ್ತೂರು: ಧರ್ಮಸ್ಥಳ ಭಜನಾ ಪರಿಷತ್ತು, ಭಜನಾ ಸತ್ಸಂಗ ಸಮಾವೇಶ ಸಮಿತಿ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಆಶ್ರಯದಲ್ಲಿ ಫೆ.8 ರಂದು ನಗರದ ಮಹತೋಭಾರ ಮಹಾಲಿಂಗೇಶ್ವರ ದೇವಳ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಭಜನಾ ಸತ್ಸಂಗ ಸಮಾವೇಶ -2020 ಮತ್ತು ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ನಡೆಯುತ್ತಿದೆ ಎಂದು ಭಜನಾ ಸತ್ಸಂಗ ಸಮಾವೇಶದ ಗೌರವ ಮಾರ್ಗದರ್ಶಕ ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಾನವೀಯ ಮೌಲ್ಯಗಳನ್ನು ಬೆಸೆಯುವ ಭಕ್ತಿ ಮಾರ್ಗದಿಂದ ಸಮಾಜವನ್ನು ಒಗ್ಗೂಡಿಸುವ ಕೆಲಸ ನಡೆಯಬೇಕು. ಪರಸ್ಪರ ನಂಬಿಕೆ ವಿಶ್ವಾಸಗಳಿಂದ ಸಮಾಜದಲ್ಲಿ ಹೊಂದಾಣಿಕೆಯ ಬದುಕಿಗೆ ಭಜನೆ ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಭಜನಾ ಸತ್ಸಂಗ ಸಮಾವೇಶದ ಯಶಸ್ಸಿಗೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ನಂತರ ಸಮಿತಿ ಕಾರ್ಯಾಧ್ಯಕ್ಷ ಅರುಣ್ಕುಮಾರ್ ಪುತ್ತಿಲ ಮಾತನಾಡಿ, ಭಜನಾ ಸತ್ಸಂಗ ಸಮಾವೇಶಕ್ಕೆ ಸುಮಾರು ಒಂದೂವರೆ ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಪೆಂಡಾಲ್ ಅಳವಡಿಸಲಾಗಿದೆ. 1600 ಭಜನಾ ಮಂಡಳಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿವೆ. ಬೃಹತ್ ಭಜನಾ ಸಂಕೀರ್ತನಾ ಯಾತ್ರೆ ನಡೆಯಲಿದ್ದು, ಆದರ್ಶ ಆಸ್ಪತ್ರೆ ರಸ್ತೆ, ಎಪಿಎಂಸಿ ರಸ್ತೆ ಮೂಲಕ ಮುಖ್ಯ ರಸ್ತೆಯಲ್ಲಿ ತೆರಳಿ ಮಹಾಲಿಂಗೇಶ್ವರ ದೇವಸ್ಥಾನದ ದೇವರಗದ್ದೆಗೆ ಆಗಮಿಸುವುದು. ಈ ಯಾತ್ರೆಯಲ್ಲಿ ಪೂರ್ಣಕುಂಭ, ವರ್ಣಮಯ ಕೊಡೆಗಳು, ಚೆಂಡೆ, ಬ್ಯಾಂಡ್, ಕುಣಿತ ಭಜನಾ ತಂಡಗಳು ಪಾಲ್ಗೊಳ್ಳಲಿವೆ ಎಂದು ಅವರು ತಿಳಿಸಿದರು. ಸಮಾವೇಶಕ್ಕೆ ಆಗಮಿಸುವ ಭಜಕರಿಗೆ ರಾತ್ರಿ ವೇಳೆ ವಿವಿಧ ಊರುಗಳಿಗೆ ತೆರಳಲು ಸರಕಾರಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಭಜನಾ ಸತ್ಸಂಗ ಸಮಾವೇಶ ಸಮಿತಿಯ ಅಧ್ಯಕ್ಷ ಧನ್ಯಕುಮಾರ್ ಬೆಳಿಯೂರುಗುತ್ತು, ಪದ್ಮನಾಭ ಶೆಟ್ಟಿ, ಯೋಜನೆಯ ಕೇಂದ್ರ ಒಕ್ಕೂಟದ ಅಧ್ಯಕ್ಷ ರಾಮಣ್ಣ ಗೌಡ ಗುಂಡೋಳೆ, ಸಮಿತಿಯ ಪ್ರಮುಖರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಲೋಕೇಶ್ ಬೆತ್ತೋಡಿ, ಜನಾರ್ದನ ಎಸ್, ರಾಜೇಶ್ ಬನ್ನೂರು, ಜಯಂತ ಪೊರೋಳಿ, ಹರಿರಾಮಚಂದ್ರ ಉಪ್ಪಿನಂಗಡಿ, ರಾಜೇಶ್ ಜೈನ್, ವಸಂತ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.