ಸುಳ್ಯ(ದಕ್ಷಿಣ ಕನ್ನಡ): ಪಿಸ್ತೂಲ್ನಿಂದ ಗುಂಡು ಹಾರಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸುಳ್ಯದ ಕಸಬಾ ತಾಲೂಕು ಜಟ್ಟಿಪಳ್ಳ ನಿವಾಸಿಯಾದ ಕೇಶವಪ್ರಭು (60) ಎಂಬುವರು ಮನೆಯ ಸಿಟೌಟ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರ ವಿರುದ್ಧ ಸುಳ್ಯ ಪೊಲೀಸ್ ಉಪನಿರೀಕ್ಷಕರಾದ ದಿಲೀಪ್ ಜಿ.ಆರ್ ದೂರು ದಾಖಲಿಸಿದ್ದಾರೆ.
ಕೇಶವಪ್ರಭು ಮನೆಯಲ್ಲಿ ಅವರ ಪಿಸ್ತೂಲ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಗಂಭೀರ ಗಾಯಗೊಂಡು ಬಿದ್ದಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತನಿಖೆಯಲ್ಲಿ ಕೇಶವಪ್ರಭು ತನ್ನ ವೈಯಕ್ತಿಕ ವಿಚಾರವಾಗಿ ಅಕ್ರಮ ನಾಡ ಪಿಸ್ತೂಲ್ನಿಂದ ತನ್ನ ಹಣೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಸಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮ ನಾಡ ಪಿಸ್ತೂಲ್ ಇಟ್ಟುಕೊಂಡ ಕೇಶವಪ್ರಭು ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಕಲಂ 3,25,27 ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಹಣದ ಸಹಾಯ ಮಾಡುವುದಿಲ್ಲ ಎಂಬ ಒಂದೇ ಕಾರಣಕ್ಕೆ ತಂದೆಯನ್ನೇ ಶೂಟ್ ಮಾಡಿ ಕೊಂದ ಮಗ