ಮಂಗಳೂರು: ತುಳುವರು ಆಹಾರದಲ್ಲಿಯೇ ಔಷಧವನ್ನ ಸೇವಿಸುತ್ತಾರೆ. ಯಾವ ವಸ್ತುವಿನಲ್ಲಿ ಯಾವ ರೀತಿಯ ಔಷಧೀಯ ಗುಣವಿದೆ ಎಂದು ಅವರು ಅರಿತಿದ್ದರು. ಮರ, ತೊಗಟೆ, ಹುಲ್ಲು, ಪಥ್ಯ, ಆಹಾರದಲ್ಲಿ ರೋಗಗಳನ್ನು ಗುಣಪಡಿಸುತ್ತಿದ್ದರು. ಆದ್ದರಿಂದ ತುಳುವರಿಗೆ ಮದ್ದು ಮಾಡುವ ವಿಧಾನ, ಆಹಾರ ಪದ್ಧತಿ ಒಂದು ಸಂಸ್ಕೃತಿಯಾಗಿದೆ. ಈ ಹಿನ್ನೆಲೆಯಲ್ಲಿ ರೋಗ ನಿರೋಧಕವಾಗಿ ಹಾಲೆ ಮರದ ತೊಗಟೆಯ ರಸವನ್ನು ಔಷಧವಾಗಿ ಸೇವಿಸುವ 'ಆಟಿ ಅಮಾವಾಸ್ಯೆ' ಆಚರಣೆ ವಿಶಿಷ್ಟವಾಗಿ ಗಮನ ಸೆಳೆಯುತ್ತದೆ.
ತುಳುನಾಡು ಎಂದು ಪರಿಗಣಿತವಾದ ಕಾಸರಗೋಡು -ದಕ್ಷಿಣ ಕನ್ನಡ - ಉಡುಪಿ ಜಿಲ್ಲಾದ್ಯಂತ ಇಂದು ತುಳುವರು ಆಟಿ ಅಮಾವಾಸ್ಯೆಯನ್ನು ಆಚರಣೆ ಮಾಡುತ್ತಿದ್ದು, ಹಾಲೆ ಮರದ ರಸದ ಕಷಾಯ ಸೇವನೆ ಮಾಡುತ್ತಾರೆ.
ತುಳುವರಿಗೆ(ಸೌರಮಾನ ಪದ್ಧತಿ ಪ್ರಕಾರ) ನಾಲ್ಕನೇಯ ತಿಂಗಳು ಕರ್ಕಾಟಕ ಮಾಸ. ಇದನ್ನು ತುಳುವರು ಆಟಿ(ಆಷಾಢ) ಎಂದು ಕರೆಯುತ್ತಾರೆ. ಇದು ಜುಲೈ - ಆಗಸ್ಟ್ ಮಧ್ಯದ ಕಾಲವಾಗಿರುತ್ತದೆ. ಆಟಿ ತಿಂಗಳು ಅಂದರೆ ವಿಪರೀತ ಮಳೆ ಬರುವ ಕಾಲ. ಅದೇ ರೀತಿ ಸಾಂಕ್ರಾಮಿಕ ರೋಗಗಳೂ ಉಲ್ಬಣವಾಗುವ ಕಾಲ. ಆದ್ದರಿಂದ ಆಟಿ ಅಮಾವಾಸ್ಯೆಯ ದಿನದಂದು ಮದ್ದುಗಳೆಲ್ಲಾ ಹಾಲೆ ಮರದಲ್ಲಿ ಐಕ್ಯವಾಗುತ್ತದೆ ಎಂಬುದು ತುಳುವರ ನಂಬಿಕೆ. ಹಾಗಾಗಿ ಅಬಾಲ ವೃದ್ಧರಾದಿಯಾಗಿ ಅಂದು ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲೆ ಮರದ ತೊಗಟೆಯ ಕಷಾಯ ಸೇವನೆ ಮಾಡುತ್ತಾರೆ. ಈ ಕಷಾಯ ಸೇವನೆ ಮಾಡಿದ್ದಲ್ಲಿ ಮುಂದೆ ಯಾವುದೇ ರೋಗ ರುಜಿನ ಬರುವುದಿಲ್ಲ ಎಂಬುದು ಪ್ರತೀತಿ.
ಹಾಲೆ ಮರದ ಕಷಾಯ ಮಾಡುವ ವಿಧಾನ: ಈ ಹಿಂದೆ ಆಟಿ ಅಮಾವಾಸ್ಯೆಯ ಹಿಂದಿನ ದಿನವೇ ಮನೆಯ ಯಜಮಾನ ಹಾಲೆ ಮರ ಇರುವ ಕಾಡಿಗೋ, ಗುಡ್ಡಕ್ಕೆ ತೆರಳಿ, ಹಾಲೆ ಮರದ ಬುಡದಲ್ಲಿ 'ವೀಳ್ಯದೆಲೆ' ಮತ್ತು 'ಬೆಣಚು ಕಲ್ಲು' ಇರಿಸಿ ಎಲ್ಲ ಮದ್ದುಗಳು ಈ ಮರದಲ್ಲಿ ಬಂದು ಸೇರಲಿ. ನಾಳೆ ನಾನು ನಿನ್ನಲ್ಲಿಗೆ ಬರುವಾಗ ನೀನು ಮದ್ದು ನೀಡಬೇಕು ಎಂದು ಪ್ರಾರ್ಥಿಸಿ, ನೂಲು ಕಟ್ಟಿ ಮೂಲಿಗೆ ಮಾಡಿ ಬರುತ್ತಾನೆ. ಮರುದಿನ ಮೈ ಮೇಲೆ ನೂಲೆಳೆಯ ಬಟ್ಟೆಯನ್ನು ಧರಿಸದೇ ನಗ್ನರಾಗಿಯೇ ಮರದ ಬುಡಕ್ಕೆ ತೆರಳಿ ಅದರ ತೊಗಟೆಯನ್ನು ಜಜ್ಜಿ ತೆಗೆಯಲಾಗುತ್ತಿತ್ತು. ಈಗ ಈ ಪದ್ಧತಿ ಕಡಿಮೆಯಾಗಿದೆ.
ಆಟಿ ಅಮಾವಾಸ್ಯೆಯಂದು ನಸುಕಿನ ಜಾವದಲ್ಲೇ ಎದ್ದು, ಹಾಲೆ ಮರ ಇರುವಲ್ಲಿಗೆ ಹೋಗಿ ಕತ್ತಿ, ಕಬ್ಬಿಣ ಇನ್ನಿತರ ಯಾವುದೇ ಸಾಧನ ಬಳಸದೇ ಬೆಣಚು ಕಲ್ಲಿನಲ್ಲಿ ಮರದ ತೊಗಟೆಯನ್ನು ಜಜ್ಜಿ ತೆಗೆಯಲಾಗುತ್ತದೆ. ಈ ತೊಗಟೆಯನ್ನು ಮನೆಗೆ ತಂದು ಅದರ ಸಿಪ್ಪೆ ತೆಗೆದು ಅರೆಯುವ ಕಲ್ಲಿನಲ್ಲಿ ಅರೆದೋ, ಕಡೆದೋ ಅಥವಾ ಜಜ್ಜಿಯೋ ರಸ ತೆಗೆಯುತ್ತಾರೆ. ಹೀಗೆ ರಸ ತೆಗೆಯುವಾಗ ಜೊತೆಗೆ ಬೆಳ್ಳುಳ್ಳಿ, ಶುಂಠಿ, ಕರಿಮೆಣಸು, ಓಮ ಇತ್ಯಾದಿಯನ್ನು ಬೆರಸುತ್ತಾರೆ. ಕೊನೆಗೆ ಕಂದು ಬಣ್ಣದ ಕಷಾಯ ರೆಡಿಯಾಗುತ್ತದೆ. ಈ ಕಷಾಯಕ್ಕೆ ಕೆಂಡದಲ್ಲಿ ಕಾದು ಬಿಸಿಯಾದ ಬೆಣಚುಕಲ್ಲನ್ನು ಮುಳಗಿಸಿ ಒಗ್ಗರಣೆ ಹಾಕಲಾಗುತ್ತದೆ. ಬಳಿಕ ಇದನ್ನು ಮನೆ ಮಂದಿಯೆಲ್ಲಾ ಔಷಧದಂತೆ ಸೇವನೆ ಮಾಡುತ್ತಾರೆ. ಯಮ ಕಹಿಯಾದ ಈ ಕಷಾಯವನ್ನು ಸೇವನೆ ಮಾಡುವಾಗ ಜೊತೆಗೆ ಒಂದು ತುಂಡು ಓಲೆ ಬೆಲ್ಲವನ್ನೂ ಸೇವನೆ ಮಾಡಲಾಗುತ್ತದೆ.
ಹಾಲೆ ಮರದ ತೊಗಟೆಯ ಕಷಾಯ ದೇಹಕ್ಕೆ ವಿಪರೀತ ಉಷ್ಣವಾದ ಕಾರಣ ಕಷಾಯ ಕುಡಿದ ಬಳಿಕ ಮೆಂತೆಯ ಗಂಜಿ ಮಾಡಿ ಸೇವಿಸಲಾಗುತ್ತದೆ. ಅಲ್ಲದೇ ಮರಗೆಸುವಿನ ಪತ್ರೊಡೆಯನ್ನು ಮಾಡಲಾಗುತ್ತದೆ. ಇದರಿಂದ ಉಷ್ಣವೇರಿದ ದೇಹ ತಂಪಾಗುತ್ತದೆ. ಇದು ತುಳುವರು ಆಹಾರದಲ್ಲಿಯೇ ಔಷಧವನ್ನ ಬಳಸುವ ವಿಶಿಷ್ಟ ಪದ್ಧತಿ.
ವಿಶೇಷವೆಂದರೆ ಹಾಲೆಮರದ ತೊಗಟೆಯ ಕಷಾಯವನ್ನು ವರ್ಷಕ್ಕೊಮ್ಮೆ ಬರುವ ಆಟಿ ಅಮಾವಾಸ್ಯೆಯಂದು ಮಾತ್ರ ಕುಡಿಯಲಾಗುತ್ತದೆ. ಬೇರೆ ಯಾವುದೇ ಸಮಯದಲ್ಲಿಯೂ ಇದರ ಕಷಾಯ ಸೇವಿಸುವುದಿಲ್ಲ. ಈ ಮೂಲಕ ಹಾಲೆಮರದ ಕಷಾಯ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಔಷಧವಾಗಿ ಸೇವಿಸುವ ಕ್ರಮವಾಗಿ ಆಚರಿಸಲ್ಪಡುತ್ತದೆ.