ಮಂಗಳೂರು: ಲಾಕ್ಡೌನ್ ಸಮಯದಲ್ಲಿ ಕೆಲವು ಕುಟುಂಬಗಳಿಗೆ ಒಂದು ಹೊತ್ತಿನ ಊಟಕ್ಕೆ ಕಷ್ಟವಾಗಿರುವ ಸಂದರ್ಭದಲ್ಲಿ ಇಲ್ಲೊಬ್ಬ ಯುವತಿ ಬೀದಿ ನಾಯಿಗಳ ಹಸಿವನ್ನು ನೀಗಿಸುವ ಕೆಲಸದಲ್ಲಿ ನಿರತಳಾಗಿದ್ದಾಳೆ.
ಈ ಸಂದರ್ಭದಲ್ಲಿ ಕೇವಲ ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳು ಕೂಡಾ ಆಹಾರವಿಲ್ಲದೆ ಕಂಗೆಟ್ಟಿವೆ. ರಸ್ತೆ ಬದಿ ತಿಂಡಿ ತಿಂದು ಬದುಕುತ್ತಿದ್ದ ಬೀದಿ ನಾಯಿಗಳಿಗೂ ಈಗ ಹಸಿವಿನ ಬಿಸಿ ತಟ್ಟಿದೆ.
ಇಲ್ಲಿಯವರೆಗೆ ಹೇಗೋ ಮೀನು ಮಾರುಕಟ್ಟೆ, ಬೇಕರಿ ತಿಂಡಿ, ಫಾಸ್ಟ್ ಫುಡ್ಗಳ ಮೊರೆ ಹೋಗುತ್ತಿದ್ದ ಬೀದಿ ನಾಯಿಗಳು ಈಗ ಪರದಾಡುವಂತಹ ಸ್ಥಿತಿ ತಲುಪಿವೆ. ಹಾಗಾಗಿ ಇವುಗಳಿಗೆ ಆಹಾರ ನೀಡಿ ಆರೈಕೆ ಮಾಡಿ ಇಲ್ಲಿನ ಯುವತಿಯೋರ್ವರು ಇದೀಗ ಎಲ್ಲರಿಗೂ ಮಾದರಿಯಾಗಿದ್ದಾರೆ.
ಬೀದಿ ನಾಯಿಗಳಿಗೆ ತಿಂಡಿ, ನೀರು ನೀಡುತ್ತಿರುವ ವನಿತೆ
ಮಂಗಳೂರು ಅನಿಮಲ್ ಕೇರ್ ಟ್ರಸ್ಟ್ನಲ್ಲಿ ಕಾರ್ಯಕರ್ತೆಯಾಗಿ ಸೇವೆ ಮಾಡುತ್ತಾ, ಖಾಸಗಿ ಸ೦ಸ್ಥೆಯಲ್ಲಿ ವೃತ್ತಿ ನಿರ್ವಹಿಸುತ್ತಾ, ಲಾಕ್ಡೌನ್ ಸಂದರ್ಭದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಿ ಅವುಗಳ ಹೊಟ್ಟೆ ತುಂಬಿಸುತ್ತಿರುವ ಇವರ ಹೆಸರು ಮಮತಾ ಕೃಷ್ಣಾಪುರ.
ಮೀನು ಮಾರುಕಟ್ಟೆ ಪರಿಸರ ಹಾಗೂ ಸುರತ್ಕಲ್, ಬೈಕಂಪಾಡಿ ಪ್ರದೇಶದಲ್ಲಿ ಅಲೆದಾಡುತ್ತಿರುವ ಬೀದಿ ನಾಯಿಗಳಿಗೆ ಇವರು ಬ್ರೆಡ್, ಬಿಸ್ಕತ್ ಹಾಗೂ ನೀರನ್ನು ನೀಡಿ ಈ ಲಾಕ್ಡೌನ್ ನಡುವೆ ಅವುಗಳ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ.