ದಾರಿಯಲ್ಲಿ ಸಿಕ್ಕ ಲಕ್ಷಾಂತರ ಹಣದ ಕೇಸ್: ದುಡ್ಡು ತಮ್ಮದು ಅಂತಾ ಬಂದ ವಾರಸುದಾರರು ಮೂವರು! - ETV Bharath Karnataka
ಮಂಗಳೂರಿನ್ಲಲಿ ಸಿಕ್ಕ ಅಪರಿಚಿತ ಹಣಕ್ಕೆ ಮೂವರು ಮಾಲೀಕರು ಎಂದು ಬಂದಿದ್ದಾರೆ. ಈ ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥವಾಗಲಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದ್ದಾರೆ.
![ದಾರಿಯಲ್ಲಿ ಸಿಕ್ಕ ಲಕ್ಷಾಂತರ ಹಣದ ಕೇಸ್: ದುಡ್ಡು ತಮ್ಮದು ಅಂತಾ ಬಂದ ವಾರಸುದಾರರು ಮೂವರು! 10 lakh found in public place in Mangalore](https://etvbharatimages.akamaized.net/etvbharat/prod-images/768-512-17199470-thumbnail-3x2-don.jpg?imwidth=3840)
ಮಂಗಳೂರು(ದಕ್ಷಿಣ ಕನ್ನಡ): ನಗರದ ಪಂಪ್ವೆಲ್ ಬಳಿಯ ರಸ್ತೆಯಲ್ಲಿ ಪತ್ತೆಯಾಗಿದ್ದ ಲಕ್ಷಾಂತರ ರೂ.ಗಳ ಹಣದ ವಾರಸುದಾರ ಎನ್ನಲಾಗಿರುವ ಮೂವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇನ್ನೂ ಹಣ ಅವರದ್ದೇ ಎಂಬ ವಿಚಾರ ದೃಢಪಟ್ಟಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ತಿಳಿಸಿದ್ದಾರೆ.
ಅಡಿಕೆ ವ್ಯಾಪಾರದಿಂದ ಬಂದಿರುವ ಹಣ ತೆಗೆದುಕೊಂಡು ಹೋಗುವಾಗ ನೋಟುಗಳ ಬಂಡಲ್ ದಾರಿಯಲ್ಲಿ ಬಿದ್ದಿದ್ದು, ಅದರಲ್ಲಿ ಒಟ್ಟು 10 ಲಕ್ಷ ರೂ. ಇತ್ತು ಎಂಬುದಾಗಿ ಅವರು ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ನ್ಯಾಯಾಲಯದಲ್ಲಿಯೇ ದೃಢಪಡಿಸಿ ಇತ್ಯರ್ಥ ಮಾಡಿಕೊಳ್ಳುವಂತೆ ಪೊಲೀಸರು ಅವರಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಇದೆ.
ಹಣ ಸಿಕ್ಕಿದ್ದು ಹೀಗೆ: ನ.26ರಂದು ಶಿವರಾಜ್ ಹಾಗೂ ತುಕಾರಾಮ್ ಎಂಬವರಿಗೆ ಪಂಪ್ವೆಲ್ ಬಸ್ ನಿಲ್ದಾಣದ ಬಳಿ ಕಂತೆ ಕಂತೆ ನೋಟುಗಳಿದ್ದ ಬ್ಯಾಗ್ ದೊರಕಿತ್ತು. ಬಳಿಕ ಪೊಲೀಸರು ಶಿವರಾಜ್ನಲ್ಲಿದ್ದ 49,000 ರೂ. ಹಣವನ್ನು ವಶಪಡಿಸಿಕೊಂಡಿದ್ದರು. ಶಿವರಾಜ್ ತುಕಾರಾಂ ಎಂಬುವರಿಗೂ ಹಣದ ಕಂತೆ ನೀಡಿದ್ದನು.
ಹಣದ ಬಗ್ಗೆ ಮಾಧ್ಯಮಗಳಲ್ಲಿ ಬಂದ ಸುದ್ದಿಯ ಬಳಿಕ ತುಕಾರಾಮ್ ಬಳಿಯಿದ್ದ 2.99 ಲಕ್ಷ ರೂ. ಹಣವನ್ನು ಆತನ ಮನೆಯವರೇ ಪೊಲೀಸ್ ಸುಪರ್ದಿಗೊಪ್ಪಿಸಿದ್ದರು. ಆದರೂ ಹಣದ ಮೂಲ ಮಾತ್ರ ಪತ್ತೆಯಾಗಿರಲಿಲ್ಲ. ಅಲ್ಲದೆ ಆ ಬಂಡಲ್ಗಳಲ್ಲಿ ಒಟ್ಟು ಎಷ್ಟು ಮೊತ್ತದ ಹಣವಿತ್ತು ಎಂಬುದೂ ತಿಳಿದು ಬಂದಿರಲಿಲ್ಲ. ಇದೀಗ ಮೂವರು ವಾರಸುದಾರರು ಠಾಣೆಗೆ ತೆರಳಿ ತಾವೇ ಆ ಹಣದ ವಾರಸುದಾರರು ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ತಂದೆಯ ಹಣ ಮರು ಹೊಂದಿಸಲು ಮಗಳ ಸರ್ಕಸ್; ಕಿಡ್ನಿ ಮಾರಲು ಮುಂದಾಗಿ ಮೋಸದ ಜಾಲಕ್ಕೆ ಬಿದ್ದಳು!