ಚಿತ್ರದುರ್ಗ: ನಾಯಿ ವಿಚಾರಕ್ಕೆ 2 ಕುಟುಂಬಗಳ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಜಾಲಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಾಲಿಕಟ್ಟೆ ನಿವಾಸಿ ಮಹಾಂತೇಶ್ (23) ಕೊಲೆಯಾದ ಯುವಕ((young man murdered). ಜಾಲಿಕಟ್ಟೆ ಗ್ರಾಮದ ಸ್ವಾಮಿ ಮತ್ತು ಆತನ ಪತ್ನಿ ಕಮಲಮ್ಮ ಎಂಬುವರು ಹತ್ಯೆ ಮಾಡಿರುವ ಆರೋಪಿಗಳು.
![young man murdered over dog issue in chitradurga](https://etvbharatimages.akamaized.net/etvbharat/prod-images/13658371_thumbnail.jpg)
ನಾಯಿ ಮಾಲೀಕ ಸ್ವಾಮಿ ಪ್ರತಿ ನಿತ್ಯ ನಾಯಿಯನ್ನು ಮಹಾಂತೇಶ್ ಮನೆ ಬಳಿಗೆ ಕರೆದೊಯ್ಯುತ್ತಿದ್ದರು. ಇದಕ್ಕೆ ಹಲವು ಬಾರಿ ವಿರೋಧ ವ್ಯಕ್ತಪಡಿಸಿದ್ದ ಮಹಾಂತೇಶ್, ನಮ್ಮ ಮನೆ ಬಳಿ ಗಲೀಜು ಮಾಡ್ತೀರಾ? ಎಂದು ಪ್ರಶ್ನಿಸಿದ್ದ. ಈ ವಿಚಾರವಾಗಿ ಮಹಾಂತೇಶ್ ಹಾಗೂ ಸ್ವಾಮಿ ನಡುವೆ ಜಗಳ ನಡೆದಿತ್ತು. ಈ ಹಿನ್ನೆಲೆ ಆರೋಪಿಗಳು ಹಿಂಬದಿಯಿಂದ ಮರದ ತುಂಡಿನಿಂದ ಮಹಾಂತೇಶ್ ತಲೆಗೆ ಹೊಡೆದು ಕೊಲೆಮಾಡಲಾಗಿದೆ. ಮಹಾಂತೇಶ್ ಮೃತಪಟ್ಟಿದ್ದಾನೆ ಎಂಬ ವಿಷಯ ತಿಳಿದ ಆರೋಪಿಗಳು ಇದೀಗ ತಲೆಮರೆಸಿಕೊಂಡಿದ್ದಾರೆ.
ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಹಿಡಿಯಲು ಬಲೆ ಬೀಸಿದ್ದಾರೆ.