ಚಿತ್ರದುರ್ಗ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಶಾಲೆಗಳನ್ನು ಪುನರ್ ಆರಂಭಿಸುವ ಕುರಿತು ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ನಾಲ್ಕು ತಿಂಗಳಿಂದ ಶಾಲೆಗಳಿಗೆ ರಜೆ ನೀಡಿರುವ ಕಾರಣ, ವಿದ್ಯಾರ್ಥಿಗಳು ಇದೀಗ ನಾನಾ ಕೆಲಸಗಳ ಕಡೆ ಮುಖ ಮಾಡುತ್ತಿದ್ದಾರೆ.
ಜುಲೈನಲ್ಲಿ ಶಾಲೆ ಆರಂಭಿಸುವುದಾಗಿ ಸರ್ಕಾರ ಈ ಮೊದಲು ಹೇಳಿತ್ತು. ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಶಾಲೆಗಳನ್ನು ಆರಂಭಿಸುವುದನ್ನು ಕೈಬಿಟ್ಟಿತ್ತು. ಅದನ್ನೇ ಬಂಡವಾಳ ಮಾಡಿಕೊಂಡಿರುವ ಕೋಟೆನಾಡು ಚಿತ್ರದುರ್ಗದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಕೃಷಿ ಚಟುವಟಿಕೆ ಸೇರಿ ಹಲವು ಕೆಲಸಗಳತ್ತ ಮುಖ ಮಾಡಿದ್ದಾರೆ.
ಈಗಾಗಲೇ ಗ್ರಾಮೀಣ ಭಾಗದ ಮಕ್ಕಳು ಉಳುಮೆ ಮಾಡುವುದು, ಜಮೀನಿಗೆ ಗೊಬ್ಬರ ಹಾಕುವುದು, ದನ ಕಾಯುವುದು, ಹಾಲು ಮಾರಾಟ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಇನ್ನೂ ಕೆಲವರು ನಗರ ಪ್ರದೇಶಗಳಲ್ಲಿ ಹಣ್ಣು ಮಾರಾಟ ಮಾಡುವಲ್ಲಿ ಮಗ್ನರಾಗಿದ್ದಾರೆ.
ದೀರ್ಘ ಅವಧಿ ರಜೆ ಸಿಕ್ಕಿದ್ದರಿಂದ ತೀರ ಬಡತನ ರೇಖೆಗಿಂತ ಕೆಳಮಟ್ಟದ ಮಕ್ಕಳು ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ರಜೆ ಮುಂದುವರಿದರೆ ಮಕ್ಕಳು ಓದಿನತ್ತ ಗಮನ ಕೊಡಲು ಆಗುವುದಿಲ್ಲ. ದುಡ್ಡು ನೋಡಿದ ಬಳಿಕ ಮಕ್ಕಳ ಮನಸ್ಸು ಬದಲಾಗುತ್ತದೆ. ಹೀಗಾಗಿ, ಇದರಿಂದ ಆದಷ್ಟು ಬೇಗ ಶಾಲೆಗಳನ್ನು ತೆರೆಯದೇ ಪರ್ಯಾಯ ಮಾರ್ಗ ಅನುಸರಿಸಿ ಮಕ್ಕಳಿಗೆ ಶಿಕ್ಷಣವನ್ನು ಒದಗಿಸಬೇಕಾಗಿದೆ ಎನ್ನುತ್ತಾರೆ ನಿವೃತ್ತ ಶಿಕ್ಷಕರೊಬ್ಬರು.