ಚಿತ್ರದುರ್ಗ : ತಾಲೂಕಿನ ಇಂಗಳದಾಳ್ ಮತ್ತು ಲಂಬಾಣಿಹಟ್ಟಿ ಗ್ರಾಮದ ರೈತರು ರಸ್ತೆಯಲ್ಲಿ ತಿರುಗಾಡಲು ಹಿಂದು ಮುಂದು ನೋಡುತ್ತಿದ್ದಾರೆ. ಕ್ಯಾದಗೇರಿಯಿಂದ ಮಾರಘಟ್ಟದವರೆಗೆ ಅಂದಾಜು 1,400 ಕೋಟಿ ವೆಚ್ಚದಲ್ಲಿ ಹೆದ್ದಾರಿ ಕಾಮಗಾರಿ ಆರಂಭಿಸಲಾಗಿದ್ದು, ಹೆದ್ದಾರಿ ಅಭಿವೃದ್ಧಿಗಾಗಿ ಜಮೀನಿನಲ್ಲಿದ್ದ ಮಣ್ಣನ್ನು ಲೂಟಿ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಪಿಎನ್ಸಿ ಕಂಪನಿ ಹೆದ್ದಾರಿ ಸಿದ್ಧಪಡಿಸಲು ಲಂಬಾಣಿಹಟ್ಟಿ ಗ್ರಾಮದ ರೈತರಿಗೆ ಜಮೀನನ್ನು ಸಮತಟ್ಟಾಗಿ ಮಾಡಿಕೊಡುತ್ತೇವೆ ಎಂದು ಹೇಳಿ ಮಣ್ಣನ್ನು ಎತ್ತಿ, ಹೊಲದಲ್ಲಿ ಸಿಕ್ಕ ಕಲ್ಲು, ಬಂಡೆ ಹಾಗೇ ಬಿಟ್ಟಿರುವುದು ಇಲ್ಲಿನ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ವರ್ಷವಷ್ಟೇ 2 ಕೋಟಿ ಖರ್ಚು ಮಾಡಿ ರಸ್ತೆ ಮಾಡಿಕೊಡಲಾಗಿತ್ತು. ಆದರೆ ಎರಡು ಮೂರು ದಿನಗಳ ಕಾಲ ಪಿಎನ್ಸಿ ಕಂಪನಿ ಹಾಗೂ ಗುತ್ತಿಗೆದಾರ ಚಂದ್ರಶೇಖರ್ ಎಂಬುವರು ಅಕ್ರಮವಾಗಿ ಲಾರಿಗಳ ಮೂಲಕ 30 - 40 ಟನ್ ಭಾರದ ಮಣ್ಣನ್ನು ಸಾಗಿಸಿದ್ದರಿಂದ ರಸ್ತೆ ಹಾಳಾಗಿದ್ದು, ಸರಿಪಡಿಸುವಂತೆ ಶಾಸಕ ತಿಪ್ಪಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಮಣ್ಣು ತೆಗೆದುಕೊಂಡು ಹೋಗಲು ನಮ್ಮದು ಯಾವುದೇ ಅಭ್ಯಂತರವಿಲ್ಲ. ಆದರೆ ಕಳೆದ ವರ್ಷ ಮಾಡಿದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದಕ್ಕೆ ಶಾಸಕ ಗರಂ ಆಗಿದ್ದು, ಹೊಸದಾಗಿ ರಸ್ತೆ ಮಾಡುವಂತೆ ಪಿಎನ್ಸಿ ಕಂಪನಿ ಅಧಿಕಾರಿಗಳಿಗೆ ಖಡಕ್ ವಾರ್ನ್ ಮಾಡಿದ್ದಾರೆ.
ಓದಿ: ಹೊಸ ವರ್ಷದ ಆರಂಭದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟದ ಪಡಿತರ ನೀಡಿಕೆ
ಸಂಬಂಧಿಸಿದ ಅಧಿಕಾರಿಗಳು ರಸ್ತೆ ಅಭಿವೃದ್ಧಿಪಡಿಸದಿದ್ದರೆ ಜಿಲ್ಲಾಧಿಕಾರಿಗಳ ಮೂಲಕ ಕಂಪನಿ ಹಾಗೂ ಗುತ್ತಿಗೆದಾರರ ವಿರುದ್ಧ ಜಿ.ಹೆಚ್. ತಿಪ್ಪಾರೆಡ್ಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ರೈತರ ಜಮೀನಿನ ಮಣ್ಣನ್ನು ಸಾಗಾಣಿಕೆ ಮಾಡಿದ್ದು, ರೈತರಿಗೆ ಅನ್ಯಾಯವಾದರೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಲಾಗುತ್ತದೆ ಎಂದು ಗುಡುಗಿದ್ದಾರೆ.