ಚಿತ್ರದುರ್ಗ: ಕೊರೊನಾ ವೈರಸ್ ಭೀತಿಯಿಂದಾಗಿ ದೇಶದಾದ್ಯಂತ ಲಾಕ್ಡೌನ್ ಮಾಡಲಾಗಿದ್ದು, ತರಕಾರಿ ಬೆಳೆದಿರುವ ರೈತರು ಮಾರುಕಟ್ಟೆಗೆ ಕೊಂಡೊಯ್ಯಲಾಗದೇ ಹೈರಾಣಾಗಿದ್ದಾರೆ.
ಜಿಲ್ಲೆಯ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಗ್ರಾಮದ ರೈತ ಈರಣ್ಣ, ಟೊಮ್ಯಾಟೋ, ಬೂದುಗುಂಬಳ, ಹಾಗಲಕಾಯಿ ಬೆಳೆದಿದ್ದು, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಂಗಲಾಗಿದ್ದಾರೆ. ಇವರು ತಮ್ಮ ಇಪ್ಪತ್ತು ಎಕರೆ ಜಮೀನಿನಲ್ಲಿ ಹಲವು ಬಗೆಯ ತರಕಾರಿಗಳನ್ನ ಬೆಳೆದಿದ್ದರು. ಈ ಬಾರಿ ಮಳೆ ಚೆನ್ನಾಗಿ ಆಗಿದ್ದರಿಂದ ನೀರಿನ ಲಭ್ಯತೆ ಹೆಚ್ಚಾಗಿತ್ತು. ಹೀಗಾಗಿ ಕಷ್ಟ ಪಟ್ಟು ಬಿತ್ತನೆ ಮಾಡಿದ್ದ ರೈತನಿಗೆ ಬೆಳೆಯೂ ಕೂಡ ಚೆನ್ನಾಗಿ ಬಂದಿದೆ. ಆದರೆ, ಲಾಕ್ಡೌನ್ನಿಂದಾಗಿ ಬೆಳೆದ ತರಕಾರಿಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲು ವಾಹನದ ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ.
ಹೀಗಾಗಿ ಬೆಳೆದ ತರಕಾರಿಯನ್ನೆಲ್ಲಾ ದನ ಕರುಗಳಿಗೆ ಹಾಗೂ ಕುರಿಗಳಿಗೆ ಹಾಕಿದ್ದು, ಆಗುತ್ತಿರುವ ನಷ್ಟವನ್ನು ಸಹಿಸಿಕೊಳ್ಳಲಾರದೆ ಟೊಮ್ಯಾಟೋ ರಾಶಿಯ ಮೇಲೆ ಬಿದ್ದು ಆಕ್ರಂದಿಸುತ್ತಿದ್ದಾನೆ.