ಚಿತ್ರದುರ್ಗ: ಜಿಲ್ಲಾಡಳಿತ ಕಟ್ಟಡ ಸಂಕೀರ್ಣ ನಿರ್ಮಾಣಕ್ಕೆ ನಗರದ ಹೊರವಲಯದಲ್ಲಿ ಕಳೆದೆರಡು ತಿಂಗಳಿಂದ ಕಟ್ಟಡ ನಿರ್ಮಾಣಕ್ಕೆ ಬೆಟ್ಟ ಸಮತಟ್ಟು ಮಾಡುವ ಕಾರ್ಯ ಭರದಿಂದ ಸಾಗುತ್ತಿದೆ. ಆದರೆ ಬೆಟ್ಟ ಸಮನಾಗಿಸಲು ಮತ್ತೆ 5 ಕೋಟಿ ರೂ. ಹೆಚ್ಚಿನ ಹೊರೆ ಜಿಲ್ಲಾಡಳಿತಕ್ಕೆ ಆಗುತ್ತಿದೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೂ ಕೂಡ ಕಾರಣವಾಗಿದೆ.
ಹಳ್ಳಿಯಿಂದ ಕಚೇರಿ ಕೆಲಸಗಳಿಗೆ ಬರುವ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಚಿತ್ರದುರ್ಗ ಹೊರವಲಯದ ರಾಷ್ಟ್ರೀಯ ಹೆದ್ದಾರಿ 04 ಬಳಿ ಜಾಗ ಗುರುತಿಸಿತು. ಕಳೆದ ಒಂದೂವರೆ ವರ್ಷದ ಹಿಂದೆಯೇ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಪ್ಲಾನ್ ರೂಪಿಸಿತ್ತು. ಅಲ್ಲದೆ ಕೋಟೆ ನಾಡಿನ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದ ಕುಂಚಿಗನಾಳು ಬೆಟ್ಟ ಸಮತಟ್ಟು ಮಾಡಿ ಜಿಲ್ಲಾಡಳಿತ ಕಟ್ಟಡ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಲಾಯಿತು.
ಓದಿ: ವನ್ಯ ಮೃಗಗಳ ಆವಾಸ ಸ್ಥಾನಕ್ಕೆ ಧಕ್ಕೆ: ಹಳ್ಳಿಗಳತ್ತ ನುಗ್ಗುತ್ತಿವೆ ಕಾಡು ಪ್ರಾಣಿಗಳು
ಒಟ್ಟು 40 ಎಕರೆ ವಿಸ್ತೀರ್ಣದಲ್ಲಿ, 44 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಡಳಿತ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ಕೂಡ ನೀಡಿದೆ. ಬಳಿಕ ಬೆಟ್ಟ ಸಮತಟ್ಟು ಮಾಡಲು ಹಾಗೂ ಕಟ್ಟಡ ಕಾಮಗಾರಿಗೆ ಅಡಿಪಾಯ ಹಾಕಲು ಈಗಾಗಲೇ ಮುಂಗಡವಾಗಿ 25 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎನ್ನಲಾಗುತ್ತಿದೆ. ಕಳೆದ ಎರಡು ತಿಂಗಳಿನಿಂದ ಪಿಎನ್ಸಿ ಕಂಪನಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಗುಡ್ಡದ ಮಣ್ಣು ತೆಗೆಯುವ ಕೆಲಸ ಮಾಡುತ್ತಿದೆ. ಇತ್ತ ಜಿಲ್ಲಾಡಳಿತದ ಕಟ್ಟಡ ನಿರ್ಮಾಣಕ್ಕೆ ಮತ್ತೆ 5 ಕೋಟಿ ರೂಪಾಯಿ ಹೊರೆಯಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುವಂತಾಗಿದೆ.
ಕಟ್ಟಡಕ್ಕೆ ನಿಗದಿಪಡಿಸಿದ ಸ್ಥಳದಲ್ಲಿ ಬೃಹತ್ ಬಂಡೆ:
ಜಿಲ್ಲಾಡಳಿತ ಕಚೇರಿ ನಿರ್ಮಿಸಲು ಬೆಟ್ಟ ಸಮತಟ್ಟು ಮಾಡುವ ಕಾರ್ಯಕ್ಕೆ ಕಳೆದೆರಡು ತಿಂಗಳಿನಿಂದ ಕೆಲಸ ಆರಂಭಗೊಂಡಿದೆ. ಕಳೆದ ವಾರವಷ್ಟೇ ನಿಗದಿಪಡಿಸಿದ ಸ್ಥಳದಲ್ಲಿ ಬೃಹತ್ ಗಾತ್ರದ ಬಂಡೆ ಇದೆ ಎಂದು ತಂತ್ರಜ್ಞರು ಹಾಗೂ ಇಂಜಿನಿಯರ್ಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಬಂಡೆ ತೆರವುಗೊಳಿಸಿ ಬೆಟ್ಟ ಸಮತಟ್ಟು ಮಾಡಲು 5 ಕೋಟಿ ರೂಪಾಯಿ ವ್ಯಯಿಸಬೇಕಾಗುತ್ತದೆ ಎಂದು ತಂತ್ರಜ್ಞರು ಸಲಹೆ ನೀಡಿದ ಬೆನ್ನಲ್ಲೇ ಸಾರ್ವಜನಿಕರು ಕೂಡ ಜಿಲ್ಲಾಡಳಿತ ಹಾಗೂ ತಂತ್ರಜ್ಞರ ವಿರುದ್ಧ ಸಿಡಿಮಿಡಿಗೊಳ್ಳುವಂತಾಗಿದೆ.
ಜಿಲ್ಲಾಡಳಿತ ಕಟ್ಟಡ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಬಳಿ ಸ್ಥಳ ನಿಗದಿ ಪಡಿಸಿದಾಗ, ತಂತ್ರಜ್ಞರು ಬೆಟ್ಟ ಹೇಗಿದೆ ಎಂಬುವುದನ್ನು ಗುರುತಿಸಬೇಕಾಗಿತ್ತು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ ಸಾವಿರಾರು ಟನ್ ಬೆಟ್ಟದ ಮಣ್ಣು ಅಗೆದ ಮೇಲೆ ಬೃಹತ್ ಬಂಡೆ ಕಾಣಿಸಿಕೊಂಡಿದೆ. ಬಂಡೆ ಬ್ಲಾಸ್ಟಿಂಗ್ ಮಾಡಲು ಹೆಚ್ಚಿನ 5 ಕೋಟಿ ರೂ. ನೀಡಬೇಕೆಂದು ಕೇಳುತ್ತಿರುವುದು ಯಾವ ನ್ಯಾಯ ಎಂದು ಪರಿಸರ ಪ್ರೇಮಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಇತ್ತ ಬೆಟ್ಟದಲ್ಲಿ ಬಂಡೆ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಬೇರೆ ಸ್ಥಳ ಹುಡುಕಾಡುವ ಲೆಕ್ಕಾಚಾರ ಮಾಡಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಈಗಾಗಲೇ ನಿಗದಿಪಡಿಸಿದ ಜಾಗದಲ್ಲೇ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಕಟ್ಟಡ ನಿರ್ಮಿಸಬೇಕು ಎಂಬುದು ಪರಿಸರ ಪ್ರೇಮಿಗಳ ಆಗ್ರಹವಾಗಿದೆ.