ಚಿತ್ರದುರ್ಗ: ಜನ ಸಾಮಾನ್ಯರಿಗೆ ಕೊರೊನಾ ವೈರಸ್ ಸಂಬಂಧಿಸಿದಂತೆ ನೂರಾರು ನಿಯಮಗಳನ್ನು ಸರ್ಕಾರ ವಿಧಿಸಿದೆ. ಆದರೆ ಆ ನಿಯಮಗಳು ಜನಪ್ರತಿನಿಧಿಗಳಿಗೆ ಅನ್ವಯಿಸುವುದಿಲ್ಲವೇ ಎಂಬ ಅನುಮಾನ ಕಾಡುತ್ತಿದೆ.
ಬಸ್ ನಲ್ಲಿ ಪ್ರಯಾಣ ಮಾಡಬೇಕಾದ್ರೂ, ಮದುವೆ ಸಮಾರಂಭ, ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸ ಬೇಕಾದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು. ಅಷ್ಟು ಮಾತ್ರವಲ್ಲದೆ ದೇವಸ್ಥಾನಗಳಲ್ಲೂ ಸರ್ಕಾರದ ನಿಯಮಗಳನ್ನು ಪಾಲಿಸಬೇಕು, ಆದರೆ ಈ ನಿಯಮಗಳು ಜನಪ್ರತಿನಿಧಿಗಳು ನಡೆಸುವ ಸಭೆಗೆ ಅನ್ವಯಿಸುವುದಿಲ್ಲ ಎಂಬುದಾಗಿ ಕೆಲ ಜನಪ್ರತಿನಿಧಿಗಳು ಸಾಬೀತು ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆಯುತ್ತಿರುವ ಸಾಮಾನ್ಯ ಸಭೆಯಲ್ಲಿ ಯಾವುದೇ ಸಾಮಾಜಿಕ ಅಂತರವೂ ಇಲ್ಲ, ಮಾಸ್ಕ್ ಕೂಡ ಧರಿಸಿಲ್ಲ, ಎಲ್ಲಾ ಸದಸ್ಯರು ಹಾಗೂ ಅಧಿಕಾರಿಗಳು ಅಕ್ಕಪಕ್ಕದಲ್ಲಿ ಕುಳಿತು ಸಭೆ ನಡೆಸುತ್ತಿದ್ದಾರೆ. ಇದನ್ನ ನೋಡಿದರೆ ಜನ ಸಾಮಾನ್ಯರಿಗೆ ಒಂದು ನ್ಯಾಯ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಇನ್ನೊಂದು ನ್ಯಾಯವೇ ಎಂಬ ಪ್ರಶ್ನೆ ಉದ್ಬವಿಸಿದೆ.