ಚಿತ್ರದುರ್ಗ: ಜಿಲ್ಲೆಯ ಏಳು ಸುತ್ತಿನ ಕೋಟೆಗೆ ಶತ್ರು ಸೈನ್ಯ ಮುತ್ತಿಗೆ ಹಾಕಿದಾಗ, ಏಕಾಂಗಿಯಾಗಿ ಹೋರಾಡಿ ಮಡಿದ ವೀರ ವನಿತೆ ಓಬವ್ವಳ ಜಯಂತಿಯನ್ನು ನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಡಿಸಿ ವೃತ್ತದಲ್ಲಿರುವ ಒನಕೆ ಓಬವ್ವಳ ಪ್ರತಿಮೆಗೆ ಛಲವಾದಿ ಮಠದ ಶ್ರೀ ಬಸವ ನಾಗಿದೇವ ಶ್ರೀ ಹಾಗೂ ಶಾಸಕ ತಿಪ್ಪಾರೆಡ್ಡಿಯವರು ಜಂಟಿಯಾಗಿ ಹೂವಿನ ಹಾರ ಹಾಕುವ ಮೂಲಕ ಗೌರವ ಸಲ್ಲಿಸಿದರು. ಜಯಂತಿ ಆಚರಿಸಲು ಸಾಕಷ್ಟು ಜನ ಒನಕೆ ಓಬವ್ವಳ ಅಭಿಮಾನಿಗಳು ಕೂಡ ಪುಷ್ಪಾರ್ಚನೆ ಮಾಡಿ ವಂದನೆ ಸಲ್ಲಿಸಿದರು. ಬಳಿಕ ಸರ್ಕಾರದಿಂದ ಓಬವ್ವ ಜಯಂತಿ ಆಚರಿಸಬೇಕು, ಕೋಟೆಯಲ್ಲಿರುವ ಸಮಾಧಿಯನ್ನು ಸ್ಮಾರಕವಾಗಿ ಮಾಡಬೇಕು ಎಂದು ಅಭಿಮಾನಿಗಳು ಶಾಸಕ ತಿಪ್ಪಾರೆಡ್ಡಿಗೆ ಮನವಿ ಮಾಡಿಕೊಂಡರು.