ಚಿತ್ರದುರ್ಗ: ಜಿಲ್ಲೆಯ ಐಮಂಗಲ ಪೊಲೀಸ್ ತರಬೇತಿ ಮೈದಾನದಲ್ಲಿ ತರಬೇತಿ ಪಡೆದ 280 ಮಂದಿ ಕರ್ನಾಟಕ ಪೊಲೀಸ್ ಇಲಾಖೆ ತರಬೇತಿ ಪಡೆದು ನಿರ್ಗಮನ ಪಥಸಂಚಲನ ನಡೆಸಿದರು.
ಕೊರೊನಾ ಸಂಕಷ್ಟದ ಸಮಯದಲ್ಲೂ ಕಳೆದ ಎಂಟು ತಿಂಗಳಿಂದ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದ ಪ್ರಶಿಕ್ಷಾರ್ಥಿಗಳು ಕೊರೊನಾ ಭಯವಿಲ್ಲದೆ ಕಾನ್ಸ್ಟೇಬಲ್ ತರಬೇತಿ ಪಡೆದುಕೊಂಡು ಇಂದು ಅಂತಿಮವಾಗಿ ಸೇವೆಗೆ ಹಾಜರಾಗಲು ಅಣಿಯಾದರು. ಐಮಂಗಲ ಪೊಲೀಸ್ ತರಬೇತಿ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪೊಲೀಸ್ ತರಬೇತಿ ಕೇಂದ್ರದ ಮಹಾನಿರ್ದೇಶಕ ಪದಮ್ ಕುಮಾರ್ ಗರ್ಗ್ ಆಗಮಿಸಿದ್ದರು. ಪ್ರಶಿಕ್ಷಣಾರ್ಥಿಗಳ ಪಥಸಂಚನಲದ ಗೌರವ ಸ್ವೀಕರಿದ ಬಳಿಕ ಮೈದಾನದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಬೆಳಗಾವಿ, ಬಾಗಲಕೋಟೆ, ಹಾಸನ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಉತ್ತರ ಕನ್ನಡ, ಶಿವಮೊಗ್ಗ, ರಾಮನಗರ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಆಯ್ಕೆಯಾಗಿ ಬಂದಿದ್ದ ಅಭ್ಯರ್ಥಿಗಳು ತರಬೇತಿ ಪಡೆದು ಇಂದು ನಡೆದ ಪ್ರತಿಜ್ಞಾವಿಧಿ ಪಡೆದರು. ಇನ್ನು ಇದೇ ವೇಳೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಪೊಲೀಸ್ ತರಬೇತಿ ಮಹಾನಿರ್ದೇಶಕ ಗರ್ಗ್, ಇಲಾಖೆಗೆ ಸೇರುವುದು ಮುಖ್ಯ ಅಲ್ಲ, ಜನರ ದುಃಖ-ದುಮ್ಮಾನಗಳನ್ನು ಸಂಯಮದಿಂದ ಕೇಳಿ ಸದ್ಗುಣ ರೂಢಿಸಿಕೊಳ್ಳಬೇಕು. ಸದಾ ಕಾಲ ಜನರ ಸೇವೆ ಹಾಗೂ ಸಾರ್ವಜನಿಕರ ಕಷ್ಟ ಆಲಿಸುವ ವ್ಯಕ್ತಿತ್ವ ರೂಪಿಸಿಕೊಂಡು ಸೇವೆ ನೀಡಬೇಕು. ಪ್ರಾಮಾಣಿಕ ಕರ್ತವ್ಯ ನಿರ್ವಹಣೆ ಜವಾಬ್ದಾರಿಯಾಗಬೇಕು ಎಂದು ಪ್ರಶಿಕ್ಷಾಣಾರ್ಥಿಗಳಿಗೆ ಕಿವಿಮಾತು ಹೇಳಿದರು.