ಚಿಕ್ಕಮಗಳೂರು : ನಿನ್ನೆ ಕಾಫಿನಾಡಲ್ಲಿ ದರೋಡೆ ಮಾಡಲು ಹೋಗಿ ಸಿಕ್ಕಿ ಬಿದ್ದ ಆರೋಪಿಗಳ ಕುರಿತಂತೆ ಮತ್ತಷ್ಟು ಸ್ಫೋಟಕ ಮಾಹಿತಿ ಹೊರ ಬಿದ್ದಿದ್ದು ಪೊಲೀಸರೇ ಬೆಚ್ಚಿ ಬೀಳುವಂತಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚಿಂದ್ರ, ಕಳೆದ ಎಂಟು ದಿನಗಳಿಂದ ಆರೋಪಿಗಳು ಯುಟ್ಯೂಬ್ ವಿಡಿಯೋ ನೋಡಿ ದರೋಡೆಗೆ ಪ್ಲ್ಯಾನ್ ಮಾಡಿದ್ದರು. ಅಗ್ನಿಶಾಮಕ ವಾಹನ ಚಾಲಕ ದೇವೇಂದ್ರಪ್ಪ ದರೋಡೆಕೋರರ ಬೈಕಿಗೆ ಗಾಡಿಯನ್ನು ಅಡ್ಡ ಹಾಕದೆ ಇದ್ದಿದ್ದರೆ ಅವರನ್ನ ಹಿಡಿಯಲು ಆಗುತ್ತಿರಲಿಲ್ಲ ಎಂದು ಎಸ್ಪಿ ತಿಳಿಸಿದರು.
ಓದಿ-ಹಾಡಹಗಲೇ ಚಾಕು ತೋರಿಸಿ ಕಳ್ಳತನಕ್ಕೆ ಯತ್ನ... ಅಟ್ಟಾಡಿಸಿ ಹಿಡಿದ ಸ್ಥಳೀಯರು
ಆರೋಪಿಗಳು ಎಂಟು ದಿನದಿಂದ ಎಲ್ಲಾ ಪ್ಲ್ಯಾನ್ ಮಾಡಿಕೊಂಡಿದ್ದರು. ದರೋಡೆ ಬಗ್ಗೆ ಆನ್ಲೈನ್ನಲ್ಲಿ ಶಿಕ್ಷಣ ಪಡೆದುಕೊಂಡಿದ್ದರು. ಯೂಟ್ಯೂಬ್ನಲ್ಲಿ ವಿಡಿಯೋ ನೋಡಿ ಅದೇ ರೀತಿ ಪ್ಲ್ಯಾನ್ ಮಾಡಿಕೊಂಡಿದ್ದರು. ಬ್ಲಾಕ್ ಜಾಕೆಟ್, ಶೂ, ಹೆಲ್ಮೆಟ್ ಖರೀದಿಸಿ, ಬೈಕಿನ ನಂಬರ್ ಪ್ಲೇಟ್ ತೆಗೆದು ಮಾಡೆಲ್ ಕೂಡ ತಿಳಿಯದಂತೆ ಬೈಕಿಗೆ ಪ್ಲಾಸ್ಟರ್ ಹಾಕಿ ಯಾವ ಗಾಡಿ ಎಂದೇ ಗೊತ್ತಾಗದಂತೆ ಬದಲಿಸಿದ್ದರು.
ಒಂದು ವೇಳೆ ಅಗ್ನಿಶಾಮಕ ವಾಹನ ಚಾಲಕ ದೇವೇಂದ್ರಪ್ಪ ಗಾಡಿ ಅಡ್ಡ ಹಾಕದೆ ಇದ್ದಿದ್ದರೆ ಅವರನ್ನು ಹಿಡಿಯಲು ಆಗುತ್ತಿರಲಿಲ್ಲ. ಅವರು ಇದೇ ಮೊದಲ ಬಾರಿಗೆ ದರೋಡೆಗೆ ಮುಂದಾಗಿದ್ದರೂ ಕೂಡ ಪ್ರೊಫೆಷನಲ್ ದರೋಡೆಕೋರರಂತೆ ಎಲ್ಲಾ ರೀತಿ ಸಜ್ಜಾಗಿ ಬಂದಿದ್ದರು. ಸದ್ಯ ದೇವೇಂದ್ರಪ್ಪನವರ ಸಮಯಪ್ರಜ್ಞೆ ಹಾಗೂ ಪೊಲೀಸರ ತಕ್ಷಣದ ಕ್ರಮದಿಂದ ಖದೀಮರು ಅರೆಸ್ಟ್ ಆಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಅಗ್ನಿಶಾಮಕ ಸಿಬ್ಬಂದಿ ದೇವೇಂದ್ರಪ್ಪ ಹಾಗೂ ಪೊಲೀಸರಿಗೆ ನಗದು ಬಹುಮಾನ ನೀಡಿ ಗೌರವಿಸಿದರು.