ಚಿಕ್ಕಮಗಳೂರು : ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಕಳಸ ಪಟ್ಟಣದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಈ ವೇಳೆ, ಸರ್ಕಾರಿ ಅಧಿಕಾರಿಗಳನ್ನು ಪ್ರತಿಭಟನೆಕಾರರು ತರಾಟೆಗೆ ತೆಗೆದುಕೊಂಡರು. ತಾಲೂಕಿನಾದ್ಯಂತ ರಸ್ತೆ ಹದಗೆಟ್ಟಿದ್ದು, ಸಂಪೂರ್ಣ ಗುಂಡಿ ಬಿದ್ದಿದೆ. ಬಾಳೆಹೊಳೆ -ಕಳಸ- ಹೊರನಾಡು-ಕುದುರೆಮುಖ ಮಾರ್ಗದ ರಸ್ತೆಯೂ ಸಂಪೂರ್ಣ ಹಾಳಾಗಿದ್ದು, ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಈ ರಸ್ತೆಯಲ್ಲಿ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಇದೆ ಆಕ್ರೋಶ ಹೊರ ಹಾಕಿದರು.
ಈ ಹಿಂದೆ ನಾಲ್ಕೈದು ಬಾರಿ ಸರ್ಕಾರದ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಆಗ ರಸ್ತೆ ದುರಸ್ತಿಗೊಳಿಸುವುದಾಗಿ ಅಧಿಕಾರಿಗಳು ಭರವಸೆಯನ್ನು ನೀಡಿ ಹೋಗಿದ್ದರು. ಭರವಸೆ ಈಡೇರದ ಹಿನ್ನೆಲೆ ನೂರಾರು ಜನರಿಂದ ಇಂದು ಮತ್ತೆ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಿಡಬ್ಲ್ಯೂಡಿ ಅಧಿಕಾರಿಯನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡಿದ್ದಾರೆ.
ರಸ್ತೆ ದುರಸ್ತಿಗೊಳಿಸಲು ನಾಲ್ಕು ದಿನ ಸಮಯ ಅವಕಾಶವನ್ನು ಪ್ರತಿಭಟನಾಕಾರರು ನೀಡಿದ್ದು, ಈ ಸಮಸ್ಯೆ ಬಗೆಹರಿಯದಿದ್ದರೆ ಗಂಭೀರ ಹೋರಾಟವನ್ನು ಮಾಡುವುದಾಗಿ ಇಲ್ಲಿನ ಸ್ಥಳೀಯರು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ದತ್ತ ಪೀಠದಲ್ಲಿ ಮತ್ತೆ ಮಾಂಸಹಾರ ಸೇವನೆ : ಹಿಂದೂ ಮುಖಂಡರ ಗಂಭೀರ ಆರೋಪ