ಚಿಕ್ಕಮಗಳೂರು: ಕಷ್ಟದಲ್ಲಿರುವ ಜನರಿಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಬರೀ ಹಸಿ ಸುಳ್ಳು ಹಾಗೂ ಭರವಸೆಗಳನ್ನು ನೀಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ, ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ನಾವು ಈಗಾಗಲೇ ಒಂದು ಸಭೆ ನಡೆಸಿದ್ದೇವೆ. ಕಳೆದ ಬಾರಿಯೂ ಅತಿವೃಷ್ಟಿ ಆಗಿತ್ತು, ಈ ಬಾರಿಯೂ ಆಗಿದೆ. ಆಗ ಮುಖ್ಯಮಂತ್ರಿ ಒಬ್ಬರೇ ಎಲ್ಲಾ ಕಡೆ ಸಂಚರಿಸಿ ಜನರ ಸಮಸ್ಯೆಗೆ ಸ್ಪಂದಿಸಿದ್ದರು ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ, ಕಳೆದ ವರ್ಷ ಪ್ರಕೃತಿ ವಿಕೋಪದಲ್ಲಿ ಮನೆ, ಜಮೀನು, ಆಸ್ತಿ-ಪಾಸ್ತಿ ಕಳೆದುಕೊಂಡವರಿಗೆ ಈ ಸರ್ಕಾರ ಸ್ಪಂದಿಸಿಲ್ಲ. ಹೂ, ಹಣ್ಣು, ತರಕಾರಿ, ಬೆಳೆದ ರೈತರು ಈಗಲೂ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಯಾರಿಗೂ ಪರಿಹಾರ ನೀಡಿಲ್ಲ. ಕೋವಿಡ್ ಬಂದಾಗ ನಾಲ್ಕೈದು ತಿಂಗಳ ಮೊದಲೇ ಈ ವಿಚಾರ ಗೊತ್ತಿದ್ದರೂ ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲಿಲ್ಲ. ಕಾಂಗ್ರೆಸ್ ಪಕ್ಷ ಸೇರಿದಂತೆ ನಮ್ಮ ಪಕ್ಷದವರು ಸಹ ಬಿಜೆಪಿ ಮಾಡಿರುವ ಅವ್ಯವಹಾರ ಕುರಿತು ದ್ವನಿ ಎತ್ತಿದ್ದಾರೆ ಎಂದರು.
ಸತ್ಯವನ್ನು ಜನರ ಮುಂದಿಡಲು ಬಿಜೆಪಿ ಸರ್ಕಾರ ವಿಫಲವಾಗಿದೆ. ಪ್ರಕೃತಿ ವಿಕೋಪದಲ್ಲಿ ಸಿಲುಕಿದ ಜನರಿಗೂ ಈ ಬಾರಿ ಸ್ಪಂದಿಸಿಲ್ಲ. ನಾಳೆ ನಡೆಯುವ ಸ್ವಾತಂತ್ರ್ಯ ದಿನದಂದು ಜಿಲ್ಲಾ ಉಸ್ತುವಾರಿ ಸಚಿವರು ಮಾಡುವ ಭಾಷಣದಲ್ಲಿ ಸರ್ಕಾರದ ಸಾಧನೆ ಬಗ್ಗೆ ಸುಳ್ಳು ಹೇಳಲಿದ್ದಾರೆ ಎನ್ನುವುದು ಗೊತ್ತು. ಹಾಗಾಗಿ ನಾವು ನಾಳೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ನಾವು ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಕುಳಿತು ಮೌನ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.