ಚಿಕ್ಕಮಗಳೂರು: ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ಈಗಾಗಲೇ ರಾಜ್ಯ ತತ್ತರಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸರ್ಕಾರ ಕಠಿಣ ಲಾಕ್ಡೌನ್ ಘೋಷಿಸಿದೆ. ಇದರಿಂದಾಗಿ ನಿರ್ಗತಿಕರು ಒಂದೊತ್ತಿನ ತುತ್ತಿಗೂ ಕಷ್ಟಪಡುತ್ತಿದ್ದಾರೆ. ಇಂತಹವರಿಗಾಗಿ ಚಿಕ್ಕಮಗಳೂರಿನ ಮಲೆನಾಡು ಕ್ರಿಶ್ಚಿಯನ್ ಅಸೋಸಿಯೇಷನ್ ವಸತಿ - ಊಟದ ಸೌಲಭ್ಯ ಕಲ್ಪಿಸಿದೆ.
ಹೊರ ರಾಜ್ಯ, ಜಿಲ್ಲೆಯಿಂದ ಕೆಲಸಕ್ಕೆ ಬಂದು ವಾಪಸ್ ಆದವರು, ಭಿಕ್ಷಕರು ಸೇರಿದಂತೆ ಹಲವು ನಿರ್ಗತಿಕರಿಗೆ ವಸತಿ, ಊಟದ ಸೌಲಭ್ಯ ಕಲ್ಪಿಸಿದ್ದಾರೆ. ಚಿಕ್ಕಮಗಳೂರಿನ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಈಗಾಗಲೇ 25ಕ್ಕೂ ಹೆಚ್ಚು ನಿರಾಶ್ರಿತರು ನೆಲೆಸಿದ್ದಾರೆ. ಇಂದು ಮತ್ತಷ್ಟು ಜನರು ಈ ಕೇಂದ್ರಕ್ಕೆ ಬರಲಿದ್ದಾರೆ. ಈ ನಿರಾಶ್ರಿತ ಕೇಂದ್ರದಲ್ಲಿ ಬಿಹಾರ, ಕೇರಳ, ಬೆಳಗಾವಿ, ಬಳ್ಳಾರಿ, ಹಾಸನ, ಶಿವಮೊಗ್ಗ ಸೇರಿದಂತೆ ವಿವಿಧ ರಾಜ್ಯದ ಜನರೂ ಇದ್ದಾರೆ. ಲಾಕ್ಡೌನ್ ಮುಗಿಯುವವರೆಗೂ ಎಲ್ಲರನ್ನೂ ನೋಡಿಕೊಂಡು ಆಮೇಲೆ ಊರಿಗೆ ಕಳುಹಿಸಿಕೊಡುವುದು ಅಥವಾ ಇಲ್ಲೇ ಕೆಲಸ ಕೊಡಿಸಲು ಸಂಸ್ಥೆ ಮುಂದಾಗಿದೆ. ಕೊರೊನಾ ಮೊದಲ ಅಲೆಯಲ್ಲೂ ಇಲ್ಲಿ ಸುಮಾರು 60ಕ್ಕೂ ಹೆಚ್ಚು ನಿರಾಶ್ರಿತರಿದ್ದರು. ಅವರಲ್ಲಿ 30ಕ್ಕೂ ಹೆಚ್ಚು ಜನರಿಗೆ ಕೆಲಸ ಕೊಡಿಸಿದ್ದರು.
ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ
ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಠಿಣ ಲಾಕ್ಡೌನ್ ಘೋಷಿಸಿದೆ. ಹೀಗಾಗಿ, ಚಿಕ್ಕಮಗಳೂರು ಪೊಲೀಸ್ ಇಲಾಖೆ ಹಾಗು ಜಿಲ್ಲಾಡಳಿತ ಫುಲ್ ಅಲರ್ಟ್ ಆಗಿದೆ. ನಗರದ ತೋಗರಿಹಂಕಲ್ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಜಿಲ್ಲಾ ಎಸ್ಪಿ ಹಾಗೂ ಜಿಲ್ಲಾಧಿಕಾರಿ ರೌಂಡ್ಸ್ ಹಾಕುತ್ತಿದ್ದು, ಅನಗತ್ಯ ಸಂಚರಿಸುವವರಿಗೆ ವಾರ್ನ್ ಮಾಡಿ ಕಳುಹಿಸುತ್ತಿದ್ದಾರೆ.
ಬೆಳಗ್ಗೆಯಿಂದಲೇ ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದು, ಅನಗತ್ಯ ಸಂಚಾರ ಮಾಡುವವರ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ.
ಓದಿ: ಬೆಂಗಳೂರಲ್ಲಿ ಲಸಿಕೆ ಪಡೆಯಲು ಯುವಕರ ನೂಕುನುಗ್ಗಲು.. 2ನೇ ಡೋಸ್ಗಾಗಿ ಮುಗಿಬಿದ್ದ ವಯಸ್ಕರು